ಕುಂಬಳೆ: ಕೇಂದ್ರ ಸರ್ಕಾರದ `ಪೌರತ್ವ ತಿದ್ದುಪಡಿ ಕಾಯ್ದೆ' ಯ ವಿರುದ್ಧ ಠರಾವು ಮಂಡಿಸಿ ಅಂಗೀಕರಿಸಿದ ಕುಂಬಳೆ ಪಂಚಾಯತಿ ಆಡಳಿತ ಸಮಿತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕುಂಬಳೆಯ ಕಂಚಿಕಟ್ಟೆಯ ಬಿ.ಸುಬ್ರಹ್ಮಣ್ಯ ನಾಯಕ್ ಅವರು ಪಂಚಾಯತ್ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ಮಂಡಿಸಿ ಬಹುಮತದಿಂದ ಅಂಗೀಕರಿಸಿದ ಬಳಿಕ ರಾಷ್ಟ್ರಪತಿಯವರು ಸಹಿ ಹಾಕಿದ ಪೌರತ್ವ ತಿದ್ದುಪಡಿ ಕಾಯ್ದೆಯು ನಿಯಮವಾಗಿ ದೇಶದೆಲ್ಲೆಡೆ ಇತ್ತೀಚೆಗೆ ಜಾರಿಗೆ ಬಂದಿದೆ. ಜ.20 ರಂದು ಕುಂಬಳೆ ಗ್ರಾಮ ಪಂಚಾಯತಿ ಆಡಳಿತ ಸಮಿತಿಯು ಸಾಮಾನ್ಯ ಸಭೆಯಲ್ಲಿ `ಪೌರತ್ವ ತಿದ್ದುಪಡಿ ಕಾಯ್ದೆ' ಯ ವಿರುದ್ಧ ಠರಾವನ್ನು ಮಂಡಿಸಿ ಅಂಗೀಕರಿಸಿದೆ. ಸದ್ರಿ ದಿನದಂದು ಉಪಸ್ಥಿತರಿದ್ದ 21 ಮಂದಿಯಲ್ಲಿ 14 ಮಂದಿ ಜನಪ್ರತಿನಿಧಿಗಳು ಈ ಠರಾವಿಗೆ ಬೆಂಬಲ ಸೂಚಿಸಿದ್ದಾರೆ.
ಕೇಂದ್ರ ಸರ್ಕಾರದ ನಿಯಮವೊಂದರ ವಿರುದ್ಧ ಗ್ರಾಮ ಪಂಚಾಯತಿಗಳು ಠರಾವು ಮಂಡಿಸುವಂತಿಲ್ಲವೆಂದು ಪಂಚಾಯತ್ ರಾಜ್ ಕಾಯ್ದೆಯಲ್ಲಿ ಹೇಳಲಾಗಿದೆ. ಆದುದರಿಂದ ಕೇಂದ್ರ ಸರ್ಕಾರದ ನಿಯಮದ ವಿರುದ್ಧ ಠರಾವು ಮಂಡಿಸಿ ಅಂಗೀಕರಿಸಿದ ಕುಂಬಳೆ ಗ್ರಾಮ ಪಂಚಾಯತಿ ಅಧಿಕೃತರ ವಿರುದ್ಧ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸಿ ಅಗತ್ಯದ ಕ್ರಮಕೈಗೊಳ್ಳಬೇಕಾಗಿಯೂ, ಹಾಗೆಯೇ ಪಂಚಾಯತ್ ರಾಜ್ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿ ಸದ್ರಿ ಠರಾವನ್ನು ಬೆಂಬಲಿಸಿದ ಕುಂಬಳೆ ಗ್ರಾಮ ಪಂಚಾಯತಿಯ 14 ಮಂದಿ ಜನಪ್ರತಿನಿಧಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕಾಗಿಯೂ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಷ್ಟ್ರಪತಿಗಳ ಸಹಿಯೊಂದಿಗೆ ನಿಯಮವಾಗಿರುವ ಕಾಲುವೆ (ಪೌರತ್ವ ತಿದ್ದುಪಡಿ ಕಾಯ್ದೆ) ಯೊಂದರ ವಿರುದ್ಧ ಠರಾವು ಮಂಡಿಸಲು ರಾಜ್ಯ ಸರ್ಕಾರಕ್ಕೂ, ಯಾವುದೇ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಅಧಿಕಾರವಿಲ್ಲದಿರುವಾಗ ಕುಂಬಳೆ ಗ್ರಾಮ ಪಂಚಾಯತಿ ಆಡಳಿತ ಸಮಿತಿಯು ಜ.20 ರಂದು ಸಭೆ ಸೇರಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಅಂಗೀಕರಿಸಿದ ಠರಾವನ್ನು ಈ ಕೂಡಲೇ ಅನೂರ್ಜಿತಗೊಳಿಸಬೇಕಾಗಿಯೂ ಈ ದೂರನ್ನು ಸಲ್ಲಿಸಿದ್ದಾರೆ.

