ಬದಿಯಡ್ಕ: ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು ಭಾನುವಾರ ಸಂಜೆ 5 ಗಂಟೆಯ ವೇಳೆಗೆ ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸುವ ಸಂಕಲ್ಪದೊಂದಿಗೆ ಮನೆಮನೆಗಳಲ್ಲಿ ಪಾಂಚಜನ್ಯ ಮೊಳಗಿಸಿ, ಸಂಗೀತ ಪರಿಕರಗಳನ್ನು ಬಾರಿಸಿದರು. ಗಂಟೆ ಜಾಗಟೆಯ ಸದ್ದಿನೊಂದಿಗೆ ಮನೆಮಂದಿಯೆಲ್ಲರೂ ಚಪ್ಪಾಳೆಯನ್ನು ತಟ್ಟಿ ಪ್ರಧಾನಿಯವರ ಮಾತನ್ನು ಅಪ್ಪಿದರು. ಕೊರೊನಾ ಜಾಗೃತಿ ಕಾರ್ಯಕರ್ತರಿಗೆ, ಆರೋಗ್ಯ ಇಲಾಖೆಯವರಿಗೆ ತನ್ಮೂಲಕ ಅಭಿನಂದನೆಯನ್ನು ಸಲ್ಲಿಸಿದರು.
ಕೊರೊನಾ ವೈರಸ್ ಸೋಂಕು ತಡೆಗೆ ಪ್ರಧಾನಿಯವರು ಕರೆನೀಡಿದ ಜನತಾ ಕಫ್ರ್ಯೂ ಬೆಂಬಲಿಸಿ ಭಾನುವಾರ ಜನರು ಮನೆಮಂದಿಯೊಂದಿಗೆ ದಿನಗಳೆದರು. ಮಕ್ಕಳೊಂದಿಗೆ ಮನೆಯಲ್ಲೇ ಇದ್ದು ಖಷಿಪಟ್ಟರು. ಸಂಜೆ ಐದು ಗಂಟೆಯ ವೇಳೆಗೆ ಕಾತರದಿಂದ ಕಾಯುತ್ತಿದ್ದ ಮಕ್ಕಳು ಮಧ್ಯಾಹ್ನದಿಂದಲೇ ಹೆಚ್ಚಿನ ಉತ್ಸಾಹದಿಂದ ಸಿದ್ಧತೆಯನ್ನು ನಡೆಸಿದ್ದರು. ಕರತಾಡನ, ಶಂಖ, ಜಾಗಟೆ, ಸಂಗೀತ ಪರಿಕರಗಳನ್ನು ಸಿದ್ಧಮಾಡಿಟ್ಟು ಆ ಕ್ಷಣಕ್ಕಾಗಿ ಕಾಯುತ್ತಿದ್ದರು.
ಐದು ಗಂಟೆಯ ವೇಳೆಗೆ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸುವ ವಿಚಾರವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರವನ್ನೂ ನೀಡಿದ್ದರು. ಅಲ್ಲದೆ ತಮ್ಮ ಮನೆಗಳಲ್ಲಿನ ಸಿದ್ಧತೆಗಳ್ನೂ ಹಂಚಿಕೊಂಡಿದ್ದರು.


