ಬೆಂಗಳೂರು: ಲೋಕಕಲ್ಯಾಣಕ್ಕಾಗಿ ಎಲ್ಲರೂ ಕೆಲಸ ಮಾಡಬೇಕು. ಸಮಾಜದ ಹಿತದೃಷ್ಟಿಯಿಂದ ಲೋಕದ ದೃಷ್ಟಿಯಿಂದ ದೇಶದ ಹಿತದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ನಗರದ ಹೊರವಲಯದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನೂತನ ವಸತಿ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯ ಎಷ್ಟೇ ಪ್ರಗತಿ ಸಾಧಿಸಿದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದು. ಆರ್ ಎಸ್ ಎಸ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಸ್ವಯಂಸೇವಕರ ನಿಷ್ಠೆ, ಪ್ರಮಾಣಿಕತೆ, ಶ್ರದ್ಧೆ ಬದಲಾಗಿಲ್ಲ. ಹಿಂದೆ ಹೇಗೆ ಕೆಲಸ ಮಾಡುತ್ತಿದ್ದರೋ ಈಗಲೂ ಹಾಗೆ ಕೆಲಸ ಮಾಡುತ್ತಿದ್ದಾರೆ ಎಂದರು.
ಮಾನವರು ಪ್ರಾಣಿ-ಪಕ್ಷಿಗಳಂತೆ ನೈಸರ್ಗಿಕ ವಾಗಿ ಇರುವುದನ್ನು ಬಳಸಿಕೊಂಡು ಬದುಕುವುದಿಲ್ಲ. ತಾನು ಜಗತ್ತಿನಲ್ಲಿ ಬದುಕಲು ಎಲ್ಲ ಬಗೆಯ ಸವಲತ್ತುಗಳು ಬೇಕೆಂದು ಮಾನವ ಬಯಸುತ್ತಾನೆ. ಇದರಿಂದ ಸಮಸ್ಯೆ ತಲೆದೋರುತ್ತದೆ ಎಂದು ಹೇಳಿದ ಅವರು, ಜಗತ್ತಿನಲ್ಲಿ ನಾವು ಮುಂದೆ ಸಾಗಬೇಕಾದರೆ ಸಾಧನೆ ಬೇಕು. ಲೋಕಕಲ್ಯಾಣಕ್ಕಾಗಿ ಸುವಿಧ ಇರಬೇಕು. ಸಾಧನೆ ಮತ್ತು ಸುವಿಧದಿಂದ ಜಗತ್ತು ಚೆನ್ನಾಗಿರುತ್ತದೆ. ಶಿಕ್ಷಣವು ಸಂಸ್ಕಾರದ ಭಾಗವಾಗಿರಬೇಕು ಮತ್ತು ಕಾರ್ಯಪರತೆಯು ಉತ್ಕøಷ್ಟ ರೂಪದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು. ಇದಕ್ಕೂ ಮೊದಲು ಭಾಗವತ್ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಕರ್ನಾಟಕದ ಮುಖ್ಯಮಂತ್ರಿ ಬಿ . ಎಸ್ ಯಡಿಯೂರಪ್ಪ , ಸಚಿವರಾದ ಆರ್ ಅಶೋಕ್, ವಿ ಸೋಮಣ್ಣ, ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಆರೆಸ್ಸೆಸ್ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್ ಭಟ್, ಜನಸೇವಾ ಕೇಂದ್ರದ ಅಧ್ಯಕ್ಷ ಸುಬ್ಬರಾಮ ಶೆಟ್ಟಿ, ಉಪಾಧ್ಯಕ್ಷ ಶ್ರೀನಿವಾಸ ಗುಪ್ತ, ಜನಸೇವಾ ವಿಶ್ವಸ್ಥ ಶ್ರೀನಿವಾಸ ಗುಪ್ತ, ರಾಘವೇಂದ್ರ ಮತ್ತು ಮುಕುಂದ್ ಮತ್ತಿತರರು ಹಾಜರಿದ್ದರು. ವೇದಿಕೆಯಲ್ಲಿ ಐವರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಸೇರಿ ಇತರ ಗಣ್ಯರು ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದರು.


