ಕಾಸರಗೋಡು: ಜಿಲ್ಲೆಯ ಇಬ್ಬರು ಶಾಸಕರು ಕೋವಿಡ್-19 ಸೋಂಕು ಬಾಧಿತ ವ್ಯಕ್ತಿಯ ಸಂಪರ್ಕ ಹೊಂದಿದ್ದರು ಎಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರು ಸ್ವಯಂ ಪ್ರೇರಣೆಯಿಂದ ಐಸೊಲೇಷನ್ಗೆ ಸೇರ್ಪಡೆಗೊಂಡಿದ್ದಾರೆ. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮತ್ತು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಈ ರೀತಿ ಐಸೊಲೇಷನ್ ಗೆ ಸೇರ್ಪಡೆಗೊಂಡಿದ್ದಾರೆ.
ಇತ್ತೀಚೆಗೆ ದುಬೈನಿಂದ ಆಗಮಿಸಿದ್ದ ವ್ಯಕ್ತಿಗೆ ಕರೊನಾ ವೈರಸ್ ಬಾಧಿಸಿರುವುದು ಗುರುವಾರವಷ್ಟೆ ಪತ್ತೆಯಾಗಿದೆ. ಈ ವ್ಯಕ್ತಿ ಪಾಲ್ಗೊಂಡಿದ್ದ ಮದುವೆ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಈ ಇಬ್ಬರೂ ಶಾಸಕರೂ ಹಾಜರಾಗಿದ್ದರು. ಎನ್.ಎ ನೆಲ್ಲಿಕುನ್ನು ಅವರು ಅವರ ಕಾಸರಗೋಡು ನೆಲ್ಲಿಕುಂಜೆಯ ನಿವಾಸ ಹಾಗೂ ಎಂ.ಸಿ ಕಮರುದ್ದೀನ್ ಅವರು ಉಪ್ಪಳದ ತಮ್ಮ ನಿವಾಸದಲ್ಲಿ ಸ್ವಯಂ ನಿಗಾದಲ್ಲಿದ್ದಾರೆ. ಸರ್ಕಾರ ಕರೊನಾ ವೈರಸ್ ವ್ಯಾಪಿಸುತ್ತಿರುವುದನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾವು ಸವಯಂ ಐಸೊಲೇಶನ್ಗೆ ಸೇರ್ಪಡೆಗೊಳ್ಳುತ್ತಿದ್ದೇವೆ. ಕರೊನಾ ವೈರಸ್ ಬಗ್ಗೆ ನಿರ್ಲಕ್ಷ್ಯ ವಹಿಸದೆ, ಜಾಗ್ರತೆ ಪಾಳಿಸುವುದು ಪ್ರತಿಯೊಬ್ಬನ ಕರ್ತವ್ಯ ಎಂದು ಇಬ್ಬರೂ ಶಾಸಕರು ತಿಳಿಸಿದ್ದಾರೆ.
ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ಇಬ್ಬರೂ ಶಾಸಕರು ಹಲವಾರು ಸಮಾರಂಭಗಳಲ್ಲಿ ಭಾಗವಹಿಸಿದ್ದು, ಪ್ರಸಕ್ತ ಇವರ ರೂಟ್ ಮ್ಯಾಪ್ ತಯಾರಿಸುವುದೇ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ದುಬೈಯಿಂದ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ಮಾ. 12ರಂದು ಏರ್ಇಂಡಿಯಾ ವಿಮಾನದಲ್ಲಿ ಆಗಮಿಸಿದ 47ರ ಹರೆಯದ ಕಾಸರಗೋಡು ಕೂಡ್ಲು ನಿವಾಸಿ, ಅಲ್ಲಿಂದ ಬೆಳಗ್ಗೆ 3.40ರ ಮಾವೇಲಿ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಸರಗೋಡಿಗೆ ಆಗಮಿಸಿದ್ದರು. ಮನೆಗೆ ಆಗಮಿಸಿದ ಇವರು ಮದುವೆ ಹಾಗೂ ಫುಟ್ಬಾಲ್ ಪಂದ್ಯಾಟ ಸಹಿತ ವಿವಿಧೆಡೆ ತೆರಳಿದ್ದರು.
ತಪಾಸಣೆಗೆ ಆದೇಶ:
ದುಬಾಯಿಯ ನಯೀಫ್ ವಲಯದಿಂದ ಊರಿಗೆ ಮರಳಿದವರು ತಕ್ಷಣ ಸ್ಥಳೀಯ ಪ್ರಾಥಮಿಕಆರೋಗ್ಯಕೇಂದ್ರಗಳಿಗೆಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ. ಈ ವಲಯದಲ್ಲಿ ನೆಲೆಸಿರುವವರಲ್ಲಿ ಕರೋನಾ ಸೋಂಕು ಬಾಧೆ ಅಧಿಕವಾಗಿ ಕಂಡುಬರುತ್ತಿರುವ ನ್ನೆಲೆಯಲ್ಲಿ ಈ ಆದೇಶ ಹೊರಡಿಸಿದ್ದಾರೆ. ನಯೀಫ್ ವಲಯದಲ್ಲಿ ಕಾಸರಗೋಡು ಜಿಲ್ಲೆಯ ಅನೇಕ ಮಂದಿ ಇದ್ದು, ಅವರಲ್ಲಿ ಕೆಲವರು ಊರಿಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.20ರ ನಂತರ ಊರಿಗೆ ವಾಪಸಾಗಿರುವವರು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಜರಾಗಬೇಕು. ಕರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ
ಯಾವ ಭೀತಿಯ ಅಗತ್ಯವಿಲ್ಲ. ಜಾಗ್ರತೆಯಿದ್ದರೆ ಸಾಕು. ರಾಜ್ಯ ಸರ್ಕಾರ ನೀಡಿರುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಕೊರೊನಾ-ರೂಟ್ ಮ್ಯಾಪ್ಗೆ ಸಿದ್ಧತೆ:
ಅತಿ ಸಮೀಪದ ಅವಧಿಯಲ್ಲಿ ಜಿಲ್ಲೆಯಲ್ಲಿ ಕರೊನಾ ಸೋಂಕು ತಗುಲಿರುವುದು ಖಚಿತಗೊಂಡಿರುವ ವ್ಯಕ್ತಿ ಜಿಲ್ಲೆಯಲ್ಲಿ ಯಾರನ್ನೆಲ್ಲ ಭೇಟಿಯಾಗಿದ್ದರೆ ಎಂಬ ಬಗ್ಗೆ ಪಟ್ಟಿ (ರೂಟ್ ಮ್ಯಾಪ್) ಸಿದ್ಧಪಡಿಸಲಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಾಯ, ಸಹಕಾರದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ. ಮಾ.19ರಂದು ಸೋಂಕು ಬಾಧೆ ಖಚಿತಗೊಂಡಿರುವ ವ್ಯಕ್ತಿ ಸಮಾರಂಭಗಳಲ್ಲಿ ಭಾಗವಹಿಸಿರುವುದಲ್ಲದೆ ಅನೇಕ ಮನೆಗಳಿಗೆ ಭೇಟಿ ನೀಡಿದ್ದರು. ಅಲ್ಲದೆ ಹಲವರ ಸಂಪರ್ಕ ನಡೆಸಿರುವ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ರೂಟ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

