ತಿರುವನಂತಪುರ: ಶಬರಿಮಲೆ ದೇವಾಲಯದ ಜಾತ್ರಾ ಮಹೋತ್ಸವ ಮಾ.29ರಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳಲಿದೆ. ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವೈದಿಕ ಸಹಿತ ನೈಮಿತ್ತಿಕ ಕಾರ್ಯಕ್ರಮಗಳಿಗೆ ಮಾತ್ರ ಉತ್ಸವ ಸೀಮಿತವಾಗಿರಲಿದ್ದು, ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ ಎಂದು ರಾಜ್ಯ ಮುಜರಾಯಿ(ದೇವಸ್ವಂ)ಖಾತೆ ಸಚಿವ ಕಡಕಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.
ಇದರ ಅಂಗವಾಗಿ 28ರಂದು ಶಬರಿಮಲೆಯ ನಡೆ ತೆರೆಯಲಾಗುವುದು. ಪತ್ತನಂತಿಟ್ಟ ಜಿಲ್ಲೆಯಲ್ಲಿ ಈ ವರೆಗೆ 9ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯೊಂದಿಗೆ ಪ್ರತಿರೋಧ ಚಟುವಟಿಕೆಗಳು ಚುರುಕಿನಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಈ ನಿಯಂತ್ರಣ ಹೇರಲಾಗಿದೆ. ಆಸ್ತಿಕರಿಗೆ ದೇವರದರ್ಶನ ಇರುವುದಿಲ್ಲ. ಏ.8ರಂದು ಪಂಪಾ ತೀರದಲ್ಲಿ ನಡೆಯುವ ಆರಾಟ್ ಉತ್ಸವದಲ್ಲೂ ಆಸ್ತಿಕರಿಗೆ ಪ್ರವೇಶ ಇರುವುದಿಲ್ಲ. ಎಲ್ಲ ಭಕ್ತಜನರು ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಸಚಿವರು ವಿನಂತಿಸಿದರು.
ದೈಹಿಕವಾಗಿ ಅಂತರಪಾಲಿಸಿ, ಸಾಮಾಜಿಕ ಏಕತೆಯೊಂದಿಗೆ ಕರೋನಾ ಎಂಬ ಮಹಾಮಾರಿಯನ್ನು ತೊಲಗಿಸೋಣ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಸಂದೇಶದಲ್ಲಿ ತಿಳಿಸಿದ್ದಾರೆ.


