ಕಾಸರಗೋಡು: ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ವಿದ್ಯಾನಗರ ಮುಟ್ಟತ್ತೋಡಿ ನಿವಾಸಿ ದೈನಬಿ(50) ಅವರಿಗೆ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಮತ್ತು ಯೂತ್ ಕಾಂಗ್ರೆಸ್ ನೆರವು ನೀಡಿದೆ.
ಆರನೇ ಕೀಮೋಗಾಗಿ ತಿರುವನಂತಪುರದ ಆರ್.ಸಿ.ಸಿ.ಗೆ ತೆರಳಿದ ಬಳಿಕ ಮನೆಗೆ ವಾಪಸಾಗಲು ಹಣವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾಗ ಸಂಸದರ ನೆರವಿನೊಂದಿಗೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನೆರವಾದರು.
ಸಾಕಷ್ಟು ಜನರ ಸಹಕಾರದೊಂದಿಗೆ ತಿರುನಂತಪುರಕ್ಕೆ ಅವರನ್ನು ಆ್ಯಂಬುಲೆನ್ಸ್ನಲ್ಲಿ ಸಾಗಿಸಲಾಗಿತ್ತು. ಕಿಮೋ ಥೆರಫಿಯ ಬಳಿಕ ಮನೆಗೆ ವಾಪಸಾಗಲು ಸಾಧ್ಯವಾಗದಿದ್ದಾಗ ಉಣ್ಣಿತ್ತಾನ್ ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಹಾಯವನ್ನೊದಗಿಸಿದರು.
ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಾಹೀನ ಸಲೀಂ ಅವರು ತಿರುವನಂತಪುರಕ್ಕೆ ತೆರಳಲು ಆ್ಯಂಬುಲೆನ್ಸ್ ಗೊತ್ತು ಮಾಡಿದ್ದರು. ಆದರೆ ಕಿಮೋ ಥೆರಫಿಯ ಬಳಿಕ ಕಾಸರಗೋಡಿನ ಮನೆಗೆ ವಾಪಸಾಗುವುದು ಕಷ್ಟದಾಯಕವಾಗಿತ್ತು. ತಿರುವನಂತಪುರದಿಂದ ವಾಪಸು ಮನೆಗೆ ತಲುಪಲು ಆ್ಯಂಬುಲೆನ್ಸ್ಗೆ ನೀಡಲು ಹಣವಿರಲಿಲ್ಲ. ಈ ಬಗ್ಗೆ ತಿಳಿದ ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಅವರು ದೈನಬಿ ಅವರನ್ನು ಊರಿಗೆ ತಲುಪಿಸಲು ನೆರವಾಗಬೇಕೆಂದು ಯೂತ್ ಕಾಂಗ್ರೆಸ್ನ ರಾಜ್ಯ ಕಾರ್ಯದರ್ಶಿ ನೋಯಲ್ ಟೋಮಿನ್ ಜೋಸೆಫ್ ಅವರನ್ನು ಕೇಳಿಕೊಂಡರು. ಯೂತ್ ಕೇರ್ ಸೇವಾ ಕಾರ್ಯಕ್ರಮದ ಅಂಗವಾಗಿ ನೋಯಲ್ ಹಾಗು ಯೂತ್ ಕಾಂಗ್ರೆಸ್ ಕಾಂಞಂಗಾಡ್ ಮಂಡಲ ಅಧ್ಯಕ್ಷ ಸಂತು ಅವರು ಸಹಕರಿಸಿದರು. ಆ್ಯಂಬುಲೆನ್ಸ್ನಲ್ಲಿ ಈ ಮೂಲಕ ದೈನಬಿ ಅವರು ಮನೆಗೆ ತಲುಪಿದರು.