ಕಾಸರಗೋಡು: ಜಿಲ್ಲೆಯಲ್ಲಿ ಹಾಟ್ಸ್ಪಾಟ್ಗಳಲ್ಲದೇ ಇರುವ ಪ್ರದೇಶಗಳಲ್ಲಿ ಚಟುವಟಿಕೆಗಳಿಗೆ ನಿಬಂಧನೆಗಳ ಮೇರೆಗೆ ಮಂಜೂರಾತಿ ನೀಡಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಹಾಟ್ ಸ್ಪಾಟ್ ಗಳಲ್ಲದೇ ಇರುವ ಗ್ರಾಮ ಪಂಚಾಯತ್, ನಗರಸಭೆಗಳ ಪ್ರದೇಶಗಳಲ್ಲಿ ಈ ಮಂಜೂರಾತಿ ಇದೆ.
ಇದರ ಅಂಗವಾಗಿ ಕರ್ಗಲ್ಲ ಕೋರೆ, ಕ್ರಷರ್ ಯೂನಿಟ್ಗಳು ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಇಲ್ಲಿ ಚಟುವಟಿಕೆ ನಡೆಸಬಹುದು. ಹಾಟ್ಸ್ಪಾಟ್ ಪ್ರದೇಶಗಳಿಗೆ ಈ ರಿಯಾಯಿತಿ ಅನ್ವಯವಲ್ಲ.
ಅನಿವಾರ್ಯ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಲು, ಅನಿವಾರ್ಯ ಸಾಮಾಗ್ರಿ ಖರೀದಿಸಲು ಮಾತ್ರ ಖಾಸಗಿ ವಾಹನಗಳ ಸಂಚಾರಕ್ಕೆ ಮಂಜೂರಾತಿ ಇರುವುದು. ದ್ವಿಚಕ್ರ ವಾಹನದಲ್ಲಿ ಒಬ್ಬರು, ನಾಲ್ಕು ಚಕ್ರ ವಾಹನದ ಮುಂಭಾಗದಲ್ಲಿ ಚಾಲಕ, ಹಿಂಬದಿ ಸೀಟಿನಲ್ಲಿ ಇಬ್ಬರು ಮಾತ್ರ ಸಂಚಾರ ನಡೆಸಬಹುದು. ನಾಲ್ಕು ಚಕ್ರ ವಾಹನದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರಕೂಡದು.
ಸೋಮವಾರ ಕೊನೆಯ ನಂಬ್ರಗಳು ಒಂದೇ ಆಗಿರಬಹುದಾದ(ಉದಾಹರಣೆಗೆ ಕೆ.ಎಲ್.14.ಎ.1055) ವಾಹನಗಳು ಸಂಚಾರ ನಡೆಸಬಹುದು. ಮೊಬೈಲ್ ಅಂಗಡಿ, ಕಂಪ್ಯೂಟರ್ ಮಾರಾಟ-ಸೇವೆ ಕೇಂದ್ರ, ಬೀಡಿ ಕಂಪೆನಿಗಳು, ಫ್ರಿಜ್-ವಾಷಿಂಗ್ ಮೆಷಿನ್-ಎ.ಸಿ.-ಫ್ಯಾನ್ ಮಾರಾಟ ಸಂಸ್ಥೆಗಳು ಸೋಮವಾರ ಚಟುವಟಿಕೆ ನಡೆಸಬಹುದು.
ಮಂಗಳವಾರ ಕೊನೆಯ ನಂಬ್ರಗಳು ಬೇರೆ ಬೇರೆ ಆಗಿರುವ (ಉದಾಹರಣೆಗೆ ಕೆ.ಎಲ್.14.ಎ.1056) ವಾಹನಗಳು ಸಂಚಾರ ನಡೆಸಬಹುದು. ಬೀಡಿ ಕಂಪೆನಿಗಳು, ಪುಸ್ತಕ ಮಾರಾಟ ಕೇಂದ್ರಗಳು ಇತ್ಯಾದಿ ಚಟುವಟಿಕೆ ನಡೆಸಬಹುದು.
ಬುಧವಾರ ಕೊನೆಯ ನಂಬ್ರಗಳು ಒಂದೇ ಆಗಿರುವ ವಾಹನಗಳು ಸಂಚಾರ ನಡೆಸಬಹುದು. ಚಿಪ್ಪಿನಿಂದ ಕುಮ್ಮಾಯ ನಿರ್ಮಿಸುವ ಸಂಸ್ಥೆಗಳು, ಅಡಕೆ ಸಂಗ್ರಹ ನಡೆಸುವ ಬದಿಯಡ್ಕ, ಪೆರ್ಲ, ನೀರ್ಚಾಲು, ಮುಳ್ಳೇರಿಯ, ಬಂದಡ್ಕ, ಬಾಯಾರು ಕ್ಯಾಂಪೆÇ್ಕೀ ಔಟ್ಲೆಟ್ಗಳು ಚಟುವಟಿಕೆ ನಡೆಸಬಹುದು. ಚಪ್ಪರ, ಧ್ವನಿ ಮತ್ತು ಬೆಳಕು ಸಂಸ್ಥೆಗಳನ್ನು ತೆರೆದು ಶುಚೀಕರಿಸಬಹುದು.
ಗುರುವಾರ ಕೊನೆಯ ನಂಬ್ರಗಳು ಬೇರೆ ಬೇರೆ ಆಗಿರುವ ವಾಹನಗಳು ಸಂಚರಿಸಬಹುದು. ವರ್ಕ್ ಶಾಪ್, ವಾಹನಗಳ ಬಿಡಿಭಾಗಗಳ ಅಂಗಡಿಗಳು ಇತ್ಯಾದಿ ಚಟುವಟಿಕೆ ನಡೆಸಬಹುದು. ಹರಿತ ಕ್ರಿಯಾ ಸೇನೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ನಡೆಸಬಹುದು.
ಶುಕ್ರವಾರ ಕೊನೆಯ ನಂಬ್ರಗಳು ಒಂದೇ ಆಗಿರುವ ವಾಹನಗಳು ಸಂಚಾರ ನಡೆಸಬಹುದು. ಪುಸ್ತಕ ಅಂಗಡಿಗಳು ಚಟುವಟಿಕೆ ನಡೆಸಬಹುದು.
ಶನಿವಾರ ಕೊನೆಯ ನಂಬ್ರಗಳು ಬೇರೆ ಬೇರೆ ಆಗಿರುವ ವಾಹನಗಳು ಸಂಚರಿಸಬಹುದು. ಘನ ವಾಹನಗಳು ಸಂಚರಿಸಬಹುದು. ಕಟ್ಟಡ ಸಾಮಾಗ್ರಿಗಳ ಮಾರಾಟ ಕೇಂದ್ರಗಳು ಚಟುವಟಿಕೆ ನಡೆಸಬಹುದು. ಟೆಕ್ಸ್ಟೈಲ್ಸ್ ಅಂಗಡಿಗಳು ಶಟರ್ ಮುಚ್ಚಿ ಒಳಗಡೆ ಶುಚೀಕರಣ ನಡೆಸಬಹುದು.
ಭಾನುವಾರ ಗೂಡ್ಸ್ ಕ್ಯಾರಿಯರ್ ವಾಹನಗಳು ಸಂಚರಿಸಬಹುದು. ಮೊಬೈಲ್ ಅಂಗಡಿಗಳು, ಕಂಪ್ಯೂಟರ್ ಮಾರಾಟ-ಸೇವೆ ಸಂಸ್ಥೆಗಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಾರಾಟ ಕೇಂದ್ರಗಳು, ವರ್ಕ್ ಶಾಪ್, ವಾಹನಗಳ ಬಿಡಿ ಭಾಗಗಳ ಮಾರಾಟ ಕೇಂದ್ರ ಚಟುವಟಿಕೆ ನಡೆಸಬಹುದು. ಈ ವಿನಾಯಿತಿ ಇರುವ ಅಂಗಡಿಗಳ ಮಾಲೀಕರು ಗುರುತು ಚೀಟಿ, ಪ್ರಮಾಣ ಪತ್ರ ಹೊಂದಿರಬೇಕು. ಚಪ್ಪಲಿ ಅಂಗಡಿಗಳನ್ನು ಶುಚೀಕರಿಸಬಹುದು. ಅನಗತ್ಯ ಸಂಚಾರಕ್ಕೆ ಅನುಮತಿಯಿಲ್ಲ.
ಹಾಟ್ ಸ್ಪಾಟ್ಗಳಲ್ಲದೇ ಇರುವ ಪ್ರದೇಶಗಳಲ್ಲಿ ನಿಬಂಧನೆಗಳ ಅನ್ವಯ ಅಕ್ಷಯ ಕೇಂದ್ರ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಈ ಪ್ರದೇಶಗಳಲ್ಲಿ ಕೃಷಿ ಮತ್ತು ತತ್ಸಂಬಂಧಿ ವಲಯಗಳಲ್ಲಿ ಕೋವಿಡ್ 19 ಮಾನದಂಡಗಳ ಪ್ರಕಾರ ವಿನಾಯಿತಿ ನೀಡಲಾಗುವುದು. ಮೊಟಕುಗೊಂಡಿರುವ ಸರ್ಕಾರಿ-ಖಾಸಗಿ ವಲಯಗಳ ನಿರ್ಮಾಣ ಚಟುವಟಿಕೆಗಳನ್ನು ಸರ್ಕಾರದ ಮಾನದಂಡಗಳ ಅನ್ವಯ ನಡೆಸಲು ಅನುಮತಿ ನೀಡಲಾಗುವುದು. ಹಾಟ್ ಸ್ಪಾಟ್ ಅಲ್ಲದೇ ಇರುವ ಗ್ರಾಮ ಪಂಚಾಯತ್ಗಳಲ್ಲಿ, ನಗರಸಭೆಗಳ ಪ್ರದೇಶಗಳಲ್ಲಿ ಮಾನದಂಡಗಳ ಅನ್ವಯ ಹೋಂ ಡೆಲಿವರಿ ನಡೆಸಬಹುದು ಎಂದವರು ಹೇಳಿದರು.



