ಮಂಜೇಶ್ವರ: ಕೋವಿಡ್ ಹಿನ್ನೆಲೆಯಲ್ಲಿ ಹೇರಲಾದ ಲಾಕ್ ಡೌನ್ ನಿಂದ ಮುಚ್ಚಲ್ಪಟ್ಟಿರುವ ಅಂತರ್ ರಾಜ್ಯ ಗಡಿಗಳಲ್ಲಿ ತಪಾಸಣೆ-ನಿಯಂತ್ರಣ ಕ್ರಮಗಳು ಈಗಲೂ ಮುಂದುವರಿದಿದೆ. ಆದರೆ ಅಂತರ್ ರಾಜ್ಯ ಸಂಚಾರಕ್ಕೆ ತಲಪ್ಪಾಡಿಯಲ್ಲಿ ಮಾತ್ರ ಪಾಸ್ ಮೂಲಕ ಅನುಮತಿ ನೀಡಿದ್ದು ಇತರ 13 ಗ್ರಾಮೀಣ ಅಂತರ್ ರಾಜ್ಯ ಗಡಿಗಳು ಸಂಪೂರ್ಣ ಇದೀಗಲೂ ಮುಚ್ಚಲ್ಪಟ್ಟಿದೆ.
ಮಂಜೇಶ್ವರ ಗಡಿಯಲ್ಲಿ ಒಂದೆಡೆ ಕೇರಳ ಹಾಗೂ ಇನ್ನೊಂದೆಡೆ ಕರ್ನಾಟಕದ ಅಧಿಕಾರಿಗಳು ಪಾಸ್ ಪರಿಶೀಲಿಸಿ ರಾಜ್ಯದೊಳಗಡೆಗೆ ಜನ ಸಂಚಾರಕ್ಕೆ ಅನುವುಮಾಡಿದೆ. ಪ್ರಸ್ತುತ ಕೇರಳಕ್ಕೆ ಈ ಹಿಂದಿನಷ್ಟು ಜನರು ಇತರ ರಾಜ್ಯಗಳಿಂದ ಆಗಮಿಸದ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಪಾಸ್ ಪರಿಶೋಧನೆ ನಡೆಯುತ್ತಿದೆ. ಕೇರಳ ಪ್ರವೇಶಿಸಿದೊಡನೆ ಕಾರ್ಯನಿರತ ಉದ್ಯೋಗಿಗಳು ಪಾಸ್ ದಾಖಲೆ, ಕೋವಿಡ್ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿ ಪ್ರವೇಶಾನುಮತಿ ನೀಡುತ್ತಾರೆ. ಕೋವಿಡ್ ಸಹಿತ ಇತರ ಅನಾರೋಗ್ಯ ಕಂಡುಬಂದಲ್ಲಿ ಕ್ವಾರಂಟೈನ್ ಗೆ ಕಳಿಸುವ ವ್ಯವಸ್ಥೆ ಇದೆ.


