ಕಾಸರಗೋಡು: ಲಾಕ್ ಡೌನ್ ಹಿನ್ನೆಲೆಯಲ್ಲಿ ದ. ಕ ಜಿಲ್ಲೆಯ ವಿವಿಧೆಡೆ ಸಿಲುಕಿಕೊಂಡಿದ್ದ ಕೇರಳದ ಎಸ್.ಎಸ್.ಎಲ್.ಸಿ., ಹೈಯರ್ ಸೆಕೆಂಡರಿ ತರಗತಿ ವಿದ್ಯಾರ್ಥಿಗಳನ್ನು ಸೋಮವಾರ ಜಿಲ್ಲೆಗೆ ಪ್ರತ್ಯೇಕ ಪಾಸ್ ಮೂಲಕ ಕರೆತರಲಾಯಿತು.
ಸೋಮವಾರ 220 ಮಂದಿ ವಿದ್ಯಾರ್ಥಿಗಳನ್ನು ತಲಪ್ಪಾಡಿ ಗಡಿ ಮೂಲಕ ಜಿಲ್ಲೆಗೆ ಕರೆತರಲಾಗಿದ್ದು, ಇವರನ್ನು ಪ್ರತ್ಯೇಕ ಕ್ವಾರಂಟೈನ್ನಲ್ಲಿರಿಸಲಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ಅವರ ಮನೆಗಳಲ್ಲೇ ವ್ಯವಸ್ಥೆ ಮಾಡಿದ್ದರೆ, ಇನ್ನುಳಿದ ವಿದ್ಯಾರ್ಥಿಗಳಿಗೆ ಅವರ ಹಾಸ್ಟೆಲ್, ಆರ್ಫನೇಜ್ ಕೇಂದ್ರಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಪರೂಪಕ್ಕೆ ಎಂಬಂತೆ ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಉಳಿದುಕೊಳ್ಳಲು ಮುಂದಾಗಿದ್ದು, ಶಾಲಾ ಮುಖ್ಯ ಶಿಕ್ಷಕರು, ಪಿಟಿಎ ಅಧ್ಯಕ್ಷರ ಮೂಲಕ ಅವರಿಗೆ ವ್ಯವಸ್ಥೆ ಮಾಡಲಾಗಿದೆ. ಹೈಯರ್ ಸಎಕೆಂಡರಿ ಪರೀಕ್ಷೆಗಳು ಮೇ 27ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಮೇ 26ರಂದೂ ವಿದ್ಯಾರ್ಥಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


