ಕಾಸರಗೋಡು: ಮಳೆಗಾಲಕ್ಕೆ ಮೊದಲು ಜಿಲ್ಲೆಯ ಎಲ್ಲ ಮನೆಗಳಲ್ಲೂ, ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲೂ, ಸರಕಾರಿ ಕಚೇರಿಗಳಲ್ಲೂ ಡ್ರೈ ಡೇ ಆಚರಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದುರಂತ ನಿವಾರಣೆ ಪ್ರಾಧಿಕಾರದ ಸಭೆಯಲ್ಲಿ ಈ ತೀರಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಮೇ 16ರಂದು ಸರಕಾರಿ ಕಚೇರಿಗಳಲ್ಲಿ, 17ರಂದು ಮನೆಗಳಲ್ಲಿ ಡ್ರೈ ಡೇ ಆಚರಿಸಬೇಕು. ವಾರ್ಡ್ ಮಟ್ಟದ ಶುಚಿತ್ವ ಸಮಿತಿಗಳು ಬುಡಮಟ್ಟದ ಚಟುವಟಿಕೆಗಳಿಗೆ ನೇತೃತ್ವ ವಹಿಸಬೇಕು. ಈ ವೇಳೆ ಕೋವಿಡ್ 19 ನಿರ್ವಹಣೆಯ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಭೆಯಲ್ಲಿ ತಿಳಿಸಲಾಯಿತು.
ಈಡಿಸ್ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯದಂತೆ ಮನೆಗಳ,ಸರ್ಕಾರಿ ಕಚೇರಿಗಳ, ಸಾರ್ವಜನಿಕ ಸಂಸ್ಥೆಗಳ ಆವರಣದ ಪ್ಲಾಸ್ಟಿಕ್ ಲಕೋಟೆಗಳು, ಗೆರಟೆ, ಟಯರ್, ಆಟಿಕೆಗಳು, ಅಡಕೆಹಾಳೆ, ರಬ್ಬರ್ ಟ್ಯೂಬ್ , ಮೊಟ್ಟೆಯ ಕವಚ, ಹೂದಾನಿಗಳು, ರಬ್ಬರ್ ಟಾಪ್ ನಡೆಸುವ ಗೆರಟೆಗಳು, ಎಳನೀರು ಚಿಪ್ಪು, ಬಾಟಲಿ ಇತ್ಯಾದಿಗಳಲ್ಲಿ ನೀರು ಕಟ್ಟಿನಲ್ಲುವ ಸಾಧ್ಯತೆಗಳಿದ್ದು, ಅವುಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಡೆಯುತ್ತದೆ. ಈ ಕಾರಣಗಳಿಂದ ಅವನ್ನು ತಕ್ಷಣ ತೆರವುಗೊಳಿಸಬೇಕು. ನೀರಿನ ಟಾಂಕಿಗಳನ್ನು ಶುಚೀಕರಿಸಿ ಮುಚ್ಚಿ ಇರಿಸಬೇಕು. ಮನೆಯ ತಾರಸಿಯಲ್ಲಿ ನೀರು ಕಟ್ಟಿನಿಲ್ಲದಂತೆ ನೋಡಿಕೊಳ್ಳಬೇಕು. ಇಲಿ ಸಹಿತ ರೋಗಹರಡಬಲ್ಲ ಜೀವಿಗಳ ನಿರ್ಮೂಲನ ನಡೆಸಬೇಕು ಇತ್ಯಾದಿ ಸಲಹೆಗಳನ್ನು ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹುಸೂರ್ ಶಿರಸ್ತೇದಾರ್ ನಾರಾಯಣನ್, ತಹಸೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.

