ಮಂಜೇಶ್ವರ: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾಗೂ ಸರ್ಕಾರ ನೀಡಿದ ಅಲ್ಪ ರಿಯಾಯಿತಿಯನ್ನು ದುರುಪಯೋಗಪಡಿಸದೆ ಭಾನುವಾರ ಜಿಲ್ಲೆಯಾದ್ಯಂತ ಮುಸ್ಲಿಮರು ಅತ್ಯಂತ ಸರಳ ಕ್ರಮಗಳ ಮೂಲಕ ಈದುಲ್ ಫಿತ್ರ್ ಹಬ್ಬ ಆಚರಿಸಿದರು.
ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಯಾರೊಬ್ಬರೂ ಮಸೀದಿಗೆ ತೆರಳದೆ ಬಹುತೇಕರು ಕುಟುಂಬದ ಯಜಮಾನನ ನೇತೃತ್ವದಲ್ಲಿ ಅವರವರ ಮನೆಯಲ್ಲೇ ಈದ್ ನಮಾಜ್ ನಿರ್ವಹಿಸಿದರು. ಸಾರ್ವಜನಿಕವಾಗಿ ತಕ್ಬೀರ್ ಧ್ವನಿ ಮೊಳಗಿಸದೆ, ಖಬರ್ ಸ್ಥಾನವನ್ನು ಸಂದರ್ಶಿಸದೆ ಮೌನವಾಗಿಯೇ ಈದ್ ಹಬ್ಬವನ್ನು ಆಚರಿಸಿ ಮಾದರಿಯಾಗಿದ್ದಾರೆ.
ಪಿಡಿಪಿ ರಾಜ್ಯ ಸಮಿತಿ ಕಾರ್ಯದರ್ಶಿ ಎಸ್.ಎಂ. ಬಶೀರ್ ರವರ ಮನೆಯಲ್ಲಿ ಬಶೀರ್ ರವರೇ ಖುತ್ಬಾ ನಿರ್ವಹಿಸಿ ನಮಾಜ್ ಗೆ ಅವರೇ ನೇತೃತ್ವ ನೀಡಿ ಕುಟುಂಬದೊಂದಿಗೆ ಈದ್ ನಮಾಜ್ ನಿರ್ವಹಿಸಿದ್ದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಯಿತು.
ಬಹುತೇಕ ಮಂದಿ ಹಳೆಯ ಉಡುಪುಗಳನ್ನೇ ಧರಿಸಿ ಸರಳತೆ ಮೆರೆದರು. ಬಟ್ಟೆ ಬರೆಗಳಿಗಾಗಿ ಮೀಸಲಿಟ್ಟ ಹಣವನ್ನು ಕೋವಿಡ್ ಲಾಕ್ ಡೌನ್ ಸಂಧಿಗದಾವಸ್ಥೆಯಲ್ಲಿ ಸಿಲುಕಿದವರಿಗೆ ಸಹಾಯ ಹಸ್ತ ಚಾಚಿ ಮಾದರಿಯಾದರು. ರಂಜಾನ್ ಉಪವಾಸ ಪೂರ್ತಿಯಾಗುವ ಫಿತರ್ ಝಕಾತನ್ನು ಸಾಮಾಜಿಕ ಅಂತರವನ್ನು ಪಾಲಿಸಿ ಫಲಾನುಭವಿಗಳ ಮನೆಗಳಿಗೆ ತಲುಪಿಸಿರುವುದು ವಿಶೇಷತೆಯಾಗಿತ್ತು. ಕೇರಳ ಮುಖ್ಯ ಮಂತ್ರಿಯವರು ಸಂಪೂರ್ಣ ಲಾಕ್ ಡೌನ್ ನಿಂದ ಅಲ್ಪ ರಿಯಾಯಿತಿಯನ್ನು ನೀಡಿದ್ದರೂ ಇದನ್ನು ದುರುಪಯೋಗಪಡಿಸದೆ ಬಹುತೇಕ ಪ್ರದೇಶಗಳಲ್ಲಿ ಸಾರ್ವಜನಿಕರು ಕಾನೂನುಪಾಲಕರ ಪ್ರಶಂಸೆಗೂ ಪಾತ್ರರಾದರು.


