ಕಾಸರಗೋಡು: ಅನ್ಯರಾಜ್ಯ ಕಾರ್ಮಿಕರನ್ನು ಅವರವರ ಊರುಗಳಿಗೆ ತಲಪಿಸುವ ಶ್ರಮಿಕ್ ರೈಲು ಕೊನೆಯ ಗಳಿಗೆಯಲ್ಲಿ ರದ್ದಾದ ಬೆನ್ನಲ್ಲೇ, ತಮ್ಮ ಪ್ರಯಾಣದ ಬಗ್ಗೆ ಆತಂಕಗೊಂಡ ಉತ್ತರಪ್ರದೇಶದ ನಿವಾಸಿಗಳು, ಕಾಸರಗೋಡು ಪುರಸಭೆ ಕಚೇರಿ ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳ ಮುಂದೆ ಪ್ರತಿಭಟನೆ ನಡೆಸಿದರು. ಹೆದ್ದಾರಿ ನಿರ್ಮಾಣ ಕಾರ್ಮಿಕರಾದ ಅನ್ಯರಾಜ್ಯದವರು ತಮ್ಮ ವಾಪಸಾತಿಗೆ ಹೇಗಾದರೂ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕ ಎನ್.ಎ.ನೆಲ್ಲಿಕ್ಕನ್ನು ಅವರ ಮನೆಯ ಮುಂದೆ ಬಂದು ದಿಗ್ಬಂಧನ ನಡೆಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಶಾಸಕರ ಮನೆ ಮುಂದೆ ಅನ್ಯರಾಜ್ಯ ಕಾರ್ಮಿಕರಾದ ಮುನ್ನೂರರಷ್ಟು ಜನರು ಪ್ರತಿಭಟನೆ ನಡೆಸಿದರು. ಪೆÇಲೀಸರು ಮಧ್ಯ ಪ್ರವೇಶಿಸಿ ಸಂಧಾನ ನಡೆಸಿ ವಿಷಯವನ್ನು ಇತ್ಯರ್ಥಪಡಿಸಿ ಗುಂಪು ಚದುರಿಸಿದರು. ಇಂತಹ ವಿಷಯಗಳಲ್ಲಿ ಜಿಲ್ಲಾಡಳಿತ ಸರಿಯಾದ ಕ್ರಮ ಕೈಗೊಳ್ಳಲು ವಿಫಲವಾದ ಕಾರಣ ಉಂಟಾದ ಗೊಂದಲಗಳು ಇದಾಗಿದೆ ಎಂದು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕ್ಕುನ್ನು ಹೇಳಿದರು. ಶನಿವಾರ ರಾತ್ರಿ ಹೊರಡಬೇಕಿದ್ದ ವಿಶೇಷ ರೈಲು ಇದ್ದಕ್ಕಿದ್ದಂತೆ ರದ್ದುಗೊಂಡಿದ್ದರ ತರುವಾಯ ಇಂತಹ ನಾಟಕೀಯ ಬೆಳವಣಿಗೆ ನಡೆಯಿತು.
ಕಾಸರಗೋಡು, ಫೆÇೀರ್ಟ್ ರಸ್ತೆ ಮತ್ತು ವಿದ್ಯಾನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುವ ಉತ್ತರ ಪ್ರದೇಶದ ನಿವಾಸಿಗಳು ರೈಲು ರದ್ದುಗೊಂಡ ಬಳಿಕ ತಮ್ಮ ವಸತಿಗೇ ಮರಳುವರೆಂದು ಎಲ್ಲರೂ ಎಣಿಸಿರುವಂತೆ ವಸತಿಗೆ ಮರಳದೆ ಹಠಾತ್ ಪ್ರತಿಭಟನೆ ನಡೆಸಿ ಗೊಂದಲಕ್ಕೆ ಕಾರಣರಾದರು.
ರೈಲು ಶನಿವಾರ ರಾತ್ರಿ 7 ಗಂಟೆಗೆ ಉತ್ತರಪ್ರದೇಶಕ್ಕೆ ತೆರಳಬೇಕಿತ್ತು. ಏತನ್ಮಧ್ಯೆ, ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ರಕ್ಷಣಾ ಉಸ್ತುವಾರಿ ವಹಿಸಿರುವ ಹಿರಿಯ ಐಎಎಸ್ ಅಧಿಕಾರಿ ಬಿಶ್ವನಾಥ ಸಿನ್ಹಾ ಅವರು ಭಾನುವಾರ ರಾತ್ರಿ ರೈಲು ಸೇವೆಯನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಎನ್.ಎ.ನೆಲ್ಲಿಕುನ್ನು ಬಳಿಕ ತಿಳಿಸಿದರು. ರಾಜ್ಯ ಸರ್ಕಾರದ ನಿರ್ಧಾರದಂತೆ ರೈಲು ರದ್ದುಗೊಳಿಸಬೇಕಾಯಿತೆಂದು ತಿಳಿದುಬಂದಿದೆ.