ಕಾಸರಗೋಡು: ಕಾಸರಗೋಡು-ಕಣ್ಣೂರು ಜಿಲ್ಲಾ ಗಡಿಯಾಗಿರುವ ಕಾಲಿಕಡವಿನಲ್ಲಿ ಕಂದಾಯ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ಗಲ್ಫ್ನ ಜನರು ಗಂಟೆಗಟ್ಟಲೆ ಸಿಲುಕಿಕೊಂಡ ಘಟನೆ ಗುರುವಾರ ನಡೆದದಿದೆ. ನೆಡುಂಬಾಶ್ಚೇರಿ ವಿಮಾನ ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಆಗಮಿಸಿದ ವಿದೇಶಿ ಉದ್ಯೋಗಿಗಳು(ವಲಸಿಗರು) ನಾಲ್ಕೂವರೆ ಗಂಟೆಗಳ ಕಾಲ ಸಿಲುಕಿಬಿದ್ದವರು. ವಿದೇಶದಿಂದ ಆಗಮಿಸಿದ ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳ 14 ಮಂದಿ ಈ ರೀತಿ ಸಿಲುಕಿದವರಾಗಿದ್ದು ಅಂತರ್ ಜಿಲ್ಲಾ ಗಡಿಯಲ್ಲಿ ಒಬ್ಬ ಕಂದಾಯ ನೌಕರ, ಒಬ್ಬ ಸ್ಟಾಫ್ ನರ್ಸ್ ಮತ್ತು ಇಬ್ಬರು ಸ್ವಯಂಸೇವಕರು ಮಾತ್ರ ಪರಿಶೋಧನೆಗಾಗಿ ಕರ್ತವ್ಯದಲ್ಲಿದ್ದರೆಂದು ತಿಳಿದುಬಂದಿದೆ.
ಎಸ್ಎಸ್ಎಲ್ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಕೊಲ್ಲಿಯಿಂದ ಆಗಮಿಸುವವರಿಗೆ ಕ್ವಾರಂಟೈನ್ ಸೌಲಭ್ಯ ಒದಗಿಸಲು ಕಜಿಲ್ಲೆಯಲ್ಲಿ ಸರ್ಕಾರಿ ವ್ಯವಸ್ಥೆಗಳಿಲ್ಲ. ಖಾಸಗೀ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಗೆ ಪ್ರತಿದಿನ ಸಾವಿರ ರೂ. ಪಾವತಿಸಬೇಕಾಗುತ್ತದೆ ಎಂದು ಕಾಲಿಕಡವಿನಲ್ಲಿ ನಿಯೋಜನೆಗೊಂಡಿದ್ದ ಓರ್ವ ಅಧಿಕಾರಿ ತಿಳಿಸಿದ್ದಾರೆ.
ಬಸ್ಸುಗಳು ಕಾಲಿಕಡವಿನಿಂದ ಮುಂಜಾನೆ 4.30 ರ ಸುಮಾರಿಗೆ ಆಯಾ ವ್ಯಕ್ತಿಗಳ ಗ್ರಾ.ಪಂ.ಗಳಿಗೆ ಕಳಿಸಲಾಗಿದ್ದು, ಆಗಮಿಸಿದವರ ಸಂಬಂಧಿಕರ ನೆರವಿನೊಂದಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿಮಾನಗಳ ಮೂಲಕ ಜಿಲ್ಲೆಗೆ ಆಗಮಿಸುವವರ ಸ್ಪಷ್ಟ ಮಾಹಿತಿಗಳನ್ನು ವಿಮಾನ ನಿಲ್ದಾಣ ಒದಗಿಸುತ್ತಿಲ್ಲ. ಜೊತೆಗೆ ಚೆಕ್ ಪಾಯಿಂಟ್ ಗಳಲ್ಲಿ ಕರ್ತವ್ಯ ನಿರತ ಉದ್ಯೋಗಿಗಳ ಕೊರತೆಯೂ ಇರುವುದರಿಂದ ಇಂತಹ ಸಮಸ್ಯೆ ಎದುರಾಗುತ್ತಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.