ನವದೆಹಲಿ: ಕೊರೋನಾ ವಿರುದ್ಧದ ಹೋರಾಟ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದ ಪ್ರಧಾನಿ ಮೋದಿ, 'ನಮ್ಮ ಕಾರ್ಯವೈಖರಿಯು ಸಹಕಾರದ ಒಕ್ಕೂಟ ವ್ಯವಸ್ಥೆಗೆ ಒಂದು ಮಾದರಿಯಾಗಿ ಉಳಿಯಲಿದೆ. ಮುಂದಿನ ತಲೆಮಾರು ಸಹ ಅದೇ ರೀತಿ ನೆನಪಿಟ್ಟುಕೊಳ್ಳಲಿದೆ' ಎಂದು ಹೇಳಿದರು.
ಕೊರೋನಾ ವೈರಸ್ ಪಿಡುಗಿಗೆ ಬಲಿಯಾದವರ ಬಗ್ಗೆ ಕಾನ್ಫ್ರೆನ್ಸ್ನ ಆರಂಭದಲ್ಲಿಯೇ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ, 'ಕೊರೋನಾ ಪಿಡುಗಿನ ವಿರುದ್ಧ ನಾವು ಒಂದು ದೇಶವಾಗಿ ಹೇಗೆ ಹೋರಾಡಿದೆವು ಎನ್ನುವುದನ್ನು ಮುಂದಿನ ತಲೆಮಾರು ನೆನಪಿಟ್ಟುಕೊಳ್ಳಲಿದೆ. ದೇಶವನ್ನು ಅಲ್ಲಾಕ್ ಮಾಡುವ ಮೊದಲ ಪ್ರಯತ್ನಕ್ಕೆ ಎರಡು ವಾರ ಆಗಿದೆ. ಈ ಅವಧಿಯಲ್ಲಿ ನಮಗೆ ಆದ ಅನುಭವಗಳು ಮುಂದಿನ ದಿನಕ್ಕೆ ಮಾರ್ಗದರ್ಶಿ ಆಗಬಲ್ಲದು. ನೀವು ನೀಡುವ ವಾಸ್ತವ ಚಿತ್ರಣ ಮತ್ತು ಸಲಹೆಗಳನ್ನು ಆಧರಿಸಿ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದು. ಕಳೆದ ಕೆಲವಾರಗಳ ಅವಧಿಯಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲಾಗಿದೆ. ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ತವರಿಗೆ ಕಳುಹಿಸಲಾಗಿದೆ. ದೇಶದ ಎಲ್ಲ ರೀತಿಯ ಸಾರಿಗೆ ಸೇವೆಗಳು ಪುನಾರಂಭಗೊಂಡಿವೆ ಎಂದು ಹೇಳಿದರು.
ಇದೇ ವೇಳೆ ಕೊರೋನಾ ವೈರಸ್ ಪಿಡುಗಿನಿಂದ ಸತ್ತವರ ಸಂಖ್ಯೆ ನಮ್ಮ ದೇಶದಲ್ಲಿ ಗಮನಾರ್ಹ ಪ್ರಮಾಣದಲ್ಲಿಲ್ಲ. ವಿಶ್ವದ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸಾವಿನ ಪ್ರಮಾಣ ತೀರಾ ಕಡಿಮೆ ಇದೆ. ಚೇತರಿಕೆ ಪ್ರಮಾಣವೂ ಶೇ 50ಕ್ಕಿಂತ ಹೆಚ್ಚು ಇದೆ. ಆದರೂ ಒಂದೇ ಒಂದು ಸಾವು ಕೂಡ ದೇಶಕ್ಕಾಗುವ ನಷ್ಟವೇ ಸರಿ. ಕೊರೋನಾ ಪಿಡುಗು ತಡೆಯಲು ಜನರು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು. ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಹೋಗುವುದನ್ನು ಯೋಚಿಸುವುದೂ ಸಲ್ಲದು. ಕೈಗಳನ್ನು ಆಗಿಂದಾಗ್ಗೆ ತೊಳೆದುಕೊಳ್ಳುವುದು ಮುಖ್ಯ' ಎಂದು ಮೋದಿ ಕಿವಿಮಾತು ಹೇಳಿದರು.
'ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿವೆ. ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಾಗಿದೆ. ಮಾರುಕಟ್ಟೆಗಳು ಪುನಾರಂಭಗೊಂಡಿವೆ. ರಫ್ತು ಪ್ರಮಾಣವೂ ಸಹಜ ಸ್ಥಿತಿಗೆ ಮರಳುತ್ತಿದೆ. ಜನ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಇದು ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಸೂಚಿಸುತ್ತದೆ. ನಮ್ಮ ಕಾರ್ಯವೈಖರಿಯು ಸಹಕಾರದ ಒಕ್ಕೂಟ ವ್ಯವಸ್ಥೆಗೆ ಒಂದು ಮಾದರಿಯಾಗಿ ಉಳಿಯಲಿದೆ. ಮುಂದಿನ ತಲೆಮಾರು ಸಹ ಅದೇ ರೀತಿ ನೆನಪಿಟ್ಟುಕೊಳ್ಳಲಿದೆ ಎಂದು ಮೋದಿ ಹೇಳಿದರು.
ಇಂದು(ಜೂನ್ 17) ಕೊರೊನಾ ಪಿಡುಗಿನಿಂದ ಅತಿಹೆಚ್ಚು ಹಾನಿ ಅನುಭವಿಸಿರುವ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಸೇರಿದತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.


