ಬೆಂಗಳೂರು: ಕೋವಿಡ್-19 ಕರ್ನಾಟಕದಲ್ಲಿ ಸಮುದಾಯ ಹಂತಕ್ಕೆ ಹರಡಿದೆ, ಅದನ್ನು ಒಪ್ಪಿಕೊಂಡು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ 9,000 ರೋಗಿಗಳ ಸಂಪರ್ಕದ ಮೂಲವನ್ನು ಶೋಧಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಪಷ್ಟ ಸಲಹೆ ನೀಡಿರುವ ತಜ್ಞರು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸುವುದಕ್ಕೆ ಸೆಂಟಿನೆಲ್ ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.
ಸಮುದಾಯ ಹರಡುವಿಕೆಯಲ್ಲಿ ಸರ್ಕಾರದ ವೈಫಲ್ಯ ಏನೂ ಇಲ್ಲ. ರಾಜ್ಯದಲ್ಲಿ ಕೊರೋನಾ ಸೋಂಕು ಸಮುದಾಯಕ್ಕೆ ಹರಡಿದೆ ಎಂಬುದನ್ನು ಘೋಷಿಸಿ, ರೋಗ ತಡೆಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಹಿರಿಯ ವೈರಾಲಜಿಸ್ಟ್ (ಸೂಕ್ಷ್ಮರೋಗಾಣು ಶಾಸ್ತ್ರಜ್ಞ)ರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಜನರಿಗೆ ಸಮುದಾಯಕ್ಕೆ ಹರಡಿರುವುದು ತಿಳಿಯಬೇಕು. ಆ ಮೂಲಕ ಜನರಲ್ಲಿ ಜವಾಬ್ದರಿಯೂ ಮೂಡುತ್ತದೆ. ಸರ್ಕಾರ ಸಮುದಾಯಕ್ಕೆ ಕೊರೋನಾ ಹರಡಿರುವುದನ್ನು ತನ್ನ ವೈಫಲ್ಯ ಎಂದು ಭಾವಿಸಬಾರದು, ಸಮುದಾಯದ ಜವಾಬ್ದಾರಿಯನ್ನೂ ಜನರು ಅರ್ಥ ಮಾಡಿಕೊಳ್ಳಬೇಕಿದೆ, ಆಂಧ್ರಪ್ರದೇಶ, ಕೇರಳಗಳಲ್ಲಿ ಯಾವ ಪ್ರಮಾಣದಲ್ಲಿ ಸಮುದಾಯಕ್ಕೆ ಹರಡಿದೆ ಎಂಬುದು ಸೆಂಟಿನೆಲ್ ಸಮೀಕ್ಷೆ ಮೂಲಕ ತಿಳಿದುಬಂದಿದೆ, ರಾಜ್ಯದಲ್ಲಿಯೂ ಸೆಂಟಿನೆಲ್ ಸಮೀಕ್ಷೆ ನಡೆಸಬೇಕೆಂಬ ಸಲಹೆ ಸರ್ಕಾರಕ್ಕೆ ನೀಡಲಾಗಿದೆ.
ಆರ್ ಟಿ-ಪಿಸಾರ್ ಡಯಾಗ್ನೊಸ್ಟಿಕ್ ಮೊಡಾಲಿಟಿ, ಆಯ್ಕೆ ಮಾಡಲಾದ ಗುಂಪಿನಲ್ಲಿ ಹೊಸ ಕೋವಿಡ್-19 ಪ್ರಕರಣಗಳನ್ನು ಗುರುತಿಸಲು ಆಂಟಿಜೆನ್ ಬೇಸ್ಡ್, ಸಿರೊಲಾಜಿಕಲ್ ವಿಧಾನದ ಮೂಲಕ ಸೆಂಟಿನೆಲ್ ಸಮೀಕ್ಷೆ ನಡೆಸಬಹುದು, ಇದು ಖಂಡಿತವಾಗಿಯೂ ಫಲಪ್ರದವಾಗುತ್ತದೆ, ಶೀಘ್ರವೇ ಈ ಸಮೀಕ್ಷೆಯನ್ನು ನಡೆಸಬೇಕೆಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಮತ್ತು ರಾಜ್ಯದ ಸಲಹೆಗಾರ ಖ್ಯಾತ ವೈರಾಲಜಿಸ್ಟ್ ಡಾ.ಗಿರಿಧರ ಆರ್.ಬಾಬು ಹೇಳಿದ್ದಾರೆ.
ಕೆಲವು ರಾಜ್ಯಗಳಲ್ಲಿ ನಡೆಸಲಾಗಿರುವ ಸೆಂಟಿನೆಲ್ ಸಮೀಕ್ಷೆ ಕೋವಿಡ್-19 ಸೋಂಕು ಪ್ರಸರಣವನ್ನು ತಡೆಗಟ್ಟಲು ಸಹಕಾರಿಯಾಗಿದೆ. ವಲಸಿಗ ಕಾರ್ಮಿಕರು, ಆರೋಗ್ಯ ಕಾರ್ಯಕರ್ತರು/ ಕೋವಿಡ್-19 ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳು ಈ ಕ್ರಮದ ಅಡಿಯಲ್ಲಿ ನೂರಾರು ಜನರನ್ನು ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ. ಈ ಮೂಲಕ ರೋಗದ ಟ್ರೆಂಡ್ ಅರಿಯುವುದಕ್ಕೆ ಸಾಧ್ಯವಾಗಲಿದೆ ಎನ್ನುತ್ತಾರೆ ಡಾ.ಬಾಬು.


