ಕಾಸರಗೋಡು: ಜಿಲ್ಲೆಯಲ್ಲಿ ಬದಿಯಡ್ಕ, ನಾಟೆಕಲ್ಲು, ಮುಳ್ಳೇರಿಯ ಪೇಟೆಗಳನ್ನೂ ಕಂಟೈನ್ಮೆಂಟ್ ಝೋನ್ಗಳಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಘೋಷಿಸಿದ್ದಾರೆ.
ಬದಿಯಡ್ಕ ಪೇಟೆಯ ತಲೆಹೊರೆ ಕಾರ್ಮಿಕರೊಬ್ಬರಿಗೆ ಕೋವಿಡ್ ಪಾಸಿಟಿವ್ ಆಗಿರುವ, ನಾಟೆಕಲ್ಲು ಮತ್ತು ಮುಳ್ಳೇರಿಯ ಪೇಟೆಗಳಲ್ಲಿ ಇತರ ರಾಜ್ಯದಿಂದ ಅಕ್ರಮವಾಗಿ ಪ್ರವೇಶಿಸಿದ ಮಂದಿಯಿಂದಾಗಿ ಕೋವಿಡ್ ಸೋಂಕು ಹರಡಿದ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ ಗಳಾಗಿ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬದಿಯಡ್ಕ ಪೇಟೆಯಲ್ಲಿ ಸದ್ರಿ ತಲೆಹೊರೆ ಕಾರ್ಮಿಕ ಅನೇಕ ವ್ಯಾಪಾರಿಗಳನ್ನು ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ಬದಿಯಡ್ಕ ಪೇಟೆಯ ಎಲ್ಲ ವ್ಯಾಪಾರ ಸಂಸ್ಥೆಗಳೂ 7 ದಿನಗಳ ಕಾಲ ಮುಚ್ಚುಗಡೆ ನಡೆಸಬೇಕು. ಮುಳ್ಳೇರಿಯ, ನಾಟೆಕಲ್ಲು ಪೇಟೆಗಳಲ್ಲೂ ವ್ಯಾಪಾರ ಸಂಸ್ಥೆಗಳು 7 ದಿನಗಳ ಕಾಲ ಮುಚ್ಚುಗಡೆ ಮಾಡಬೇಕು. ಅನಿವಾರ್ಯ ಸಾಮಾಗ್ರಿಗಳ ಮಾರಾಟ ಅಂಗಡಿಗಳು ಮಾತ್ರ ದಿನ ಬಿಟ್ಟು ದಿನ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ತೆರೆದು ಚಟುವಟಿಕೆ ನಡೆಸಬಹುದು. ಆಟೋರಿಕ್ಷಾ, ಟ್ಯಾಕ್ಸಿಗಳು ಇಲ್ಲಿ ಚಟುವಟಿಕೆ ನಡೆಸಕೂಡದು. ಬಸ್ಗಳು ಈ ಪ್ರದೇಶಗಳಲ್ಲಿ ನಿಲುಗಡೆ ಮಾಡಿ ಪ್ರಯಾಣಿರನ್ನು ಇಳಿಸುವುದು, ಹೇರುವುದು ಕೂಡದು. ಈ ಪ್ರದೇಶಗಳಲ್ಲಿ ಸ್ಥಳೀಯ ಪೆÇಲೀಸರು ಸೂಕ್ಷ್ಮ ನಿಗಾ ನಡೆಸುವರು ಎಂದು ನುಡಿದಿದ್ದಾರೆ.
ಜನ ರೋಗ ಹರಡದಂತೆ ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾ„ಕಾರಿ ತಿಳಿಸಿದರು. ಜನ ಗುಂಪು ಸೇರದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಸಾಬೂನು ಯಾ ಹ್ಯಾಂಡ್ ವಾಷ್ ಬಳಸಿ ಕೈತೊಳೆಯಬೇಕು, ಸ್ಯಾನಿಟೈಸರ್ ಬಳಸಿ ಕೈಗಳನ್ನು ರೋಗಾಣುಮುಕ್ತ ಗೊಳಿಸುತ್ತಿರಬೇಕು ಎಂದವರು ನುಡಿದರು.
ವನಾಂತರ ಸಹಿತ ಪ್ರದೇಶಗಳ ಮೂಲಕ ಜನ ಅಕ್ರಮವಾಗಿ ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ತಡೆಯುವಲ್ಲಿ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕು. ಇಂಥಾ ಜನರ ಮೂಲಕ ಸೋಂಕು ಹರಡುತ್ತಿರುವುದು ವ್ಯಾಪಕವಾಗಿ ನಡೆಯುತ್ತಿದೆ. ಇಂಥವರ ಬಗ್ಗೆ ಮಾಹಿತಿಗಳಿದ್ದಲ್ಲಿ ತಕ್ಷಣ ಪೆÇಲೀಸರಿಗೆ ತಿಳಿಸಬೇಕು. ದೊಡ್ಡ ಪ್ರಮಾಣದ ಜನಪರ ಚಟುವಟಿಕೆಗಳಿಂದ ಮಾತ್ರ ಕೋವಿಡ್ ಹರಡುವಿಕೆಯನ್ನು ತಡೆಯಬಹುದಾಗಿದೆ. ಅದಕ್ಕೆ ಎಲ್ಲ ಜನತೆ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿರುವರು.


