ಕಾಸರಗೋಡು: ಆರೋಗ್ಯ ಇಲಾಖೆಯ ಕಟ್ಟುನಿಟ್ಟುಗಳನ್ನು ಯಥಾವತ್ತಾಗಿ ಪಾಲಿಸುವ ಮೂಲಕ ಕೋವಿಡ್ ಸೋಂಕಿನಿಂದ ಮುಕ್ತರಾಗಿ ಉಮ್ಮರ್ ಫಾರೂಕ್ ಮಾದರಿಯಾಗಿದ್ದಾರೆ.
ಬಂದ್ಯೋಡು ಅಡ್ಕ ನಿವಾಸಿಯಾಗಿರುವ ಇವರು ಮಂಗಳೂರಿನ ಸಂಸ್ಥೆಯೊಂದರಲ್ಲಿ ಸಿಟಿ ಸ್ಕ್ಯಾನ್ ಟೆಕ್ನಾಲಜಿಸ್ಟ್ ಆಗಿ ನೌಕರಿ ಹೊಂದಿದ್ದಾರೆ. ಇವರು ಕಾಸರಗೋಡು ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶದಲ್ಲಿ ಸಡಿಲಿಕೆ ಜಾರಿಗೊಂಡಿದ್ದ ಹಿನ್ನೆಲೆಯಲ್ಲಿ ಮತ್ತೆ ಉದ್ಯೋಗಕ್ಕೆ ತೆರಳಿ, ಮರಳುತ್ತಿದ್ದರು. ಕೆಲವೇ ದಿನಗಳಲ್ಲಿ ಕೆಮ್ಮು, ಶರೀರದಲ್ಲಿ ನೋವು ಕಾಣಿಸಿಕೊಂಡ ವೇಳೆ ಉದಾಸೀನತೆ ತಳೆಯದೇ ಅವರು ಸರಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿದ್ದರು. ಒಂದೊಮ್ಮೆ ರೋಗ ಬಾಧಿಸಿರುವುದು ಹೌದಾಗಿದ್ದರೆ ಯಾವ ಕಾರಣಕ್ಕೂ ತನ್ನಿಂದ ಬೇರೊಬ್ಬರಿಗೆ ಸೋಂಕು ತಗುಲಕೂಡದು ಎಂಬ ಎಚ್ಚರಿಕೆಯನ್ನು ಆರಂಭದಿಂದಲೇ ತಳೆದುಕೊಂಡಿದ್ದೆ. ಈ ಅವಧಿಯಲ್ಲೇ ಮನೆ ಮಂದಿಯ, ಒಡನಾಡಿಗಳ ಸಂಪರ್ಕವನ್ನು ಸ್ವಯಂ ಪ್ರೇರಣೆಯಿಂದಲೇ ಕಡಿದುಕೊಂಡಿದ್ದೆ ಎಂದವರು ತಿಳಿಸಿದರು.
ತಪಾಸಣೆಯ ಫಲಿತಾಂಶ ಲಭಿಸುವವರೆಗೆ ರೂಂ ಕ್ವಾರೆಂಟೈನ್ ಗೆ ದಾಖಲಾಗಿದ್ದರು. ಜು.4ರಂದು ಬಂದ ಫಲಿತಾಂಶ ಇವರಿಗೆ ಕೋವಿಡ್ ಪಾಸಿಟಿವ್ ಎಂದು ಖಚಿತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇವರನ್ನು ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಜು.21ರಂದು ಪೂರ್ಣರೂಪದಲ್ಲಿ ಗುಣಮುಖರಾಗಿ ಇವರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಈ ಅವಧಿಯಲ್ಲೂ ಸಧ್ಯಕ್ಕೆ ತಮ್ಮನ್ನು ಯಾರೂ ಭೇಟಿಯಾಗುವುದು ಬೇಡ ಎಂಬ ತೀರ್ಮಾನದಲ್ಲಿ ಅವರಿದ್ದಾರೆ.
ಚಿಕಿತ್ಸೆಯ ಅವಧಿಯಲ್ಲಿ ದೇವತಾ ಸ್ವರೂಪರಾಗಿ ವೈದ್ಯರು, ದಾದಿಯರು, ಇನ್ನಿತರ ಆರೋಗ್ಯ ಇಲಾಖೆ ಸಿಬ್ಬಂದಿ, ಕಾರ್ಯಕರ್ತರು ತಮಗೆ ಶುಶ್ರೂಷೆ ನೀಡಿದ್ದಾರೆ ಎಂದು ಫಾರೂಕ್ ಅಭಿಪ್ರಾಯಪಡುತ್ತಾರೆ. ರಾಜ್ಯ ಸರಕಾರ, ಆರೋಗ್ಯ ಇಲಾಖೆ ತಿಳಿಸುವ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸುವ ಮೂಲಕ ನಮ್ಮ ನಾಡಿನಲ್ಲಿ ಹರಡುತ್ತಿರುವ ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸಬಹುದು ಎಂದು ಸಾರ್ವಜನಿಕರಿಗೆ ಅವರು ಕಿವಿಮಾತು ಹೇಳುತ್ತಾರೆ.
ಕ್ವಾರೆಂಟೈನ್ ವೇಳೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪುಸ್ತಕಗಳೇ ತಮ್ಮ ಸಂಗಾತಿಗಾಗಿದ್ದವು ಎನ್ನುತ್ತಾರೆ ಈ 24 ವರ್ಷದ ಯುವಕ. ಅಜಯ್ ಕೆ.ಪಾಂಡೆ, ಚೇತನ್ ಭಗತ್ ಸಹಿತ ಖ್ಯಾತ ಬರಹಗಾರರ ಎಲ್ಲ ಪುಸ್ತಗಳನ್ನೂ ತಾವು ಈ ಸಂದರ್ಭ ಓದಿರುವುದಾಗಿ ತಿಳಿಸುತ್ತಾರೆ.


