ಕಾಸರಗೋಡು: ಉಪ್ಪಳ ಹಿದಾಯತ್ ನಗರದಲ್ಲಿ ಶುಕ್ರವಾರ ಕೋವಿಡ್ ಕಾರಣ ಮೃತಪಟ್ಟ ನಫೀಸ(74) ಅವರ ಸಾವಿನ ವರದಿಘಳಾವುದೂ ತಿರುವನಂತಪುರದ ಸೆಕ್ರಟರಿಯೇಟ್ ಆವರಣಕ್ಕೆ ಶನಿವಾರ ಸಂಜೆಯವರೆಗೂ ಲಭ್ಯವಾಗದಿರುವುದು ಆಶ್ಚರ್ಯ ಹಾಗೂ ಪ್ರತಿಭಟನೆಗೆ ಕಾರಣವಾದ ವಿದ್ಯಮಾನ ನಡೆದಿದೆ.
ಅನಾರೋಗ್ಯ ಕಾರಣ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದ ನಫೀಸ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಇವರಿಗೆ ಕೋವಿಡ್ ಬಾಧಿಸಿರುವುದು ದೃಢಪಟ್ಟಿತ್ತು. ಶನಿವಾರ ಬೆಳಿಗ್ಗೆ ಪರಿಯಾರಂ ನಿಂದ ಕಾನೂನಾತ್ಮಕ ಚಟುವಟಿಕೆಗಳನ್ನು ಪೂರೈಸಿ ಬಳಿಕ ಆರೋಗ್ಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರ ನೆರವಿನೊಂದಿಗೆ ಉಪ್ಪಳಕ್ಕೆ ತಂದು ಅಂತ್ಯವಿಧಿಗಳನ್ನು ನೆರವೇರಿಸಲಾಯಿತು.
ಆದರೆ ಶನಿವಾರ ಸಂಜೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೈನಂದಿನ ಕೋವಿಡ್ ಅವಲೋಕನ ನಡೆಸಿ, ಬಳಿಕ ನಡೆಸುವ ಸುದ್ದಿಗೋಷ್ಠಿಯಲ್ಲಿ ಕಾಸರಗೋಡಿನ ಕೋವಿಡ್ ಮರಣದ ಬಗ್ಗೆ ಚಕಾರವೆತ್ತದಿರುವುದು ಆಶ್ಚರ್ಯ ಮೂಡಿಸಿತು. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ರಾಂ ದಾಸ್ ಪ್ರತಿಕ್ರಿಯಿಸಿದ್ದು ಜಿಲ್ಲಾ ಕೇಂದ್ರದಿಂದ ಮಧ್ಯಾಹ್ನದ ಮೊದಲೇ ವರದಿಗಳನ್ನು ಕಳಿಸಿಕೊಡಲಾಗಿದೆ ಎಂದಿರುವರು. ಆದರೂ ಮುಖ್ಯಮಂತ್ರಿಗಳ ದೈನಂದಿನ ಮಾಹಿತಿ ಗೋಷ್ಠಿಯಲ್ಲಿ ಕಾಸರಗೋಡಿನ ಕೋವಿಡ್ ಮರಣದ ಬಗ್ಗೆ ಉಲ್ಲೇಖೀಸಲ್ಪಡದಿರುವುದು ಯಾಕೆಂದು ಯಾರಿಗೂ ಸ್ಪಷ್ಟವಾಗಿಲ್ಲ.
ಗಡಿನಾಡೆಂಬ ಅವಗಣನೆಯೇ?
ಸಮಾನ್ಯವಾಗಿ ಕಾಸರಗೋಡು ಬಹುಸಂಖ್ಯಾತ ಕನ್ನಡಿಗರಿರುವ ಗಡಿನಾಡು ಆಗಿರುವುದರಿಂದ ನಿರ್ಲಕ್ಷ್ಯಕ್ಕೊಳಗಾಗಿ ನಲುಗುತ್ತಿದೆ. ರಾಜ್ಯದಲ್ಲೇ ಎಂತಹ ಯೋಜನೆಗಳೇ ಆಗಲಿ ಅನುಷ್ಠಾನಗೊಳ್ಳುವ ವೇಳೆ ಕಾಸರಗೋಡಿಗೆ ಪ್ರಾತಿನಿಧ್ಯ ಕಡಿಮೆ ಇರುತ್ತದೆ. ಕೆಲವೊಮ್ಮೆ ಅದೂ ಇರುವುದಿಲ್ಲ. ಕೋವಿಡ್ ಮರಣವೂ ಹೀಗೆಯೋ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಕಾಸರಗೋಡು ಮತ್ತು ಕಣ್ಣೂರು ಜಿಲ್ಲಾ ಆರೋಗ್ಯ ಇಲಾಖೆ ದಿನನಿತ್ಯದ ಕಾರ್ಯವಿಧಾನದ ಭಾವಾಗಿ ರಾಜ್ಯ ಕೋವಿಡ್ ವೀಕ್ಷಣಾ ವಿಭಾಗಕ್ಕೆ ಸಾವಿನ ವರದಿ ಮಾಡಿತ್ತು. ಆದರೂ ರಾಜ್ಯ ಕೋವಿಡ್ ಮಾನಿಟರಿಂಗ್ ಸೆಲ್ಗೆ ಈ ಬಗ್ಗೆ ತಿಳಿದಿರಲಿಲ್ಲ. ಸಾವಿನ ಸಂಖ್ಯೆಯನ್ನು ಜಿಲ್ಲಾ ಆರೋಗ್ಯ ಇಲಾಖೆಯ ವೆಬ್ಸೈಟ್ನಲ್ಲಿ ಮತ್ತು ಪಿಆರ್ಡಿಯ ನಿಯಮಿತ ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿಲ್ಲ ಏಕೆಂದರೆ ಅದು ಸರ್ಕಾರದ ವರದಿಯಲ್ಲಿಲ್ಲ.
ಜುಲೈ 7 ರಂದು ನಿಧನರಾದ ಮೊಗ್ರಾಲ್ ಪುತ್ತೂರಿನ ಅಬ್ದುಲ್ ರಹಮಾನ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಆದರೆ, ಅವರು ಕೇರಳದಲ್ಲಿ ಚಿಕಿತ್ಸೆ ಪಡೆಯದ ಕಾರಣ ಈ ಸಾವನ್ನು ರಾಜ್ಯ ಸರ್ಕಾರದ ದಾಖಲೆಯಲ್ಲಿ ಸೇರಿಸಲಾಗಿಲ್ಲ. ಜೊತೆಗೆ ಜಿಲ್ಲಾ ವೈದ್ಯಕೀಯ ಕಚೇರಿಯಿಂದ ಬಿಡುಗಡೆಯಾದ ರೋಗಿಗಳ ಮಾಹಿತಿಯಲ್ಲಿ ಅಸ್ಪಷ್ಟತೆ ಇದೆ. 29 ರೋಗಿಗಳ ಮಾಹಿತಿಯನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಮೊದಲ ಪತ್ರಿಕಾ ಪ್ರಕಟಣೆಯ ಪ್ರಕಾರ 3 ಮಂದಿ ಇತರ ರಾಜ್ಯದವರು. ಆದರೆ ವಿವರಗಳಲ್ಲಿ ಐದು ಎಂದು ಉಲ್ಲೇಖಿಸಲಾಗಿದೆ.
ಟಿಪ್ಪಣಿಯಲ್ಲಿ ಕೇವಲ 22 ಸಂಪರ್ಕ ರೋಗಿಗಳನ್ನು ಉಲ್ಲೇಖಿಸಲಾಗಿದೆ. ಏತನ್ಮಧ್ಯೆ, ನಿನ್ನೆ ಕೋವಿಡ್ ಕಾರಣ ನಾಟೆಕಲ್ಲು, ಮುಳ್ಳೇರಿಯ ಮತ್ತು ನೀರ್ಚಾಲ್ ಪ್ರದೇಶಗಳಲ್ಲಿನ ಕಂಟೈನ್ಮೆಂಟ್ ಪ್ರದೇಶವಾಗಿ ಘೋಶಿಸಲಾಗಿದೆ. ಕೋವಿಡ್ ಬಾಧಿಸಿದೆ ಎಂಬ ವರದಿಯ ಅನುಸಾರ ತಲೆಹೊರೆ ಕಾರ್ಮಿಕನೋರ್ವನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ತಲೆಹೊರೆ ಕಾರ್ಮಿಕನಿಗೆ ಕೋವಿಡ್ ಪಾಸಿಟಿವ್ ಆಗಿರುವ ವಿವರಣೆ ಪಿ ಆರ್ ಡಿ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಗೊಂಡಿಲ್ಲ. ಪ್ರಕರಣಗಳ ಸಂಖ್ಯೆ ಶುಕ್ರವಾರ 505 ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವೆಬ್ಸೈಟ್ ತಿಳಿಸಿದೆ. ಶನಿವಾರ ಇನ್ನೂ ಏಳು ಜನರು ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಅಂದಾಜಿನ ಪ್ರಕಾರ, ಒಟ್ಟು ರೋಗಿಗಳ ಸಂಖ್ಯೆ 512 ಎಂದು ನಿರೀಕ್ಷಿಸಲಾಗಿದೆ.
ಜಿಲ್ಲಾ ಮಟ್ಟದಿಂದ ರಾಜ್ಯ-ರಾಷ್ಟ್ರ ಮಟ್ಟದವರೆಗೂ ಕೋವಿಡ್ ವರದಿಗಳಲ್ಲಿ ಸರ್ಕಾರ ಹಾಗೂ ಆ ಸಂಬಂಧಿ ಸಂಸ್ಥೆಗಳು ಆರಂಭದಿಂದಲೇ ಅಸ್ಪಷ್ಟ ವರದಿ ನೀಡುತ್ತಿದೆ ಎಂದು ಸಮರಸ ಸುದ್ದಿ ಕಳೆದ ಜೂನ್ ತಿಂಗಳಲ್ಲೇ ಸಂಶಯಿಸಿರುವುದು ಇದೀಗ ಬಹುತೇಕ ನಿಜವಾಗುತ್ತಿದೆ.


