ಬದಿಯಡ್ಕ: ಜಿಲ್ಲೆಯಲ್ಲಿ ಅಧಿಕ ಗೊಳ್ಳುತ್ತಿರುವ ಕೋವಿಡ್ ಪ್ರಕರಣಗಳು ತೀವ್ರ ಕಳವಳಕ್ಕೆ ಕಾರಣವಾಗುತ್ತಿದ್ದು ಸೋಂಕಿತರಿಂದ ಇತರರರಿಗೆ ಸೋಂಕು ಹಬ್ಬದಂತೆ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೊಳ್ಳುವ ಸಾಧ್ಯತೆ ಇದೆ. ಈ ಮಧ್ಯೆ ಜನರು ಈ ಹಿಂದಿನಂತೆ ಪೇಟೆಗಳಲ್ಲಿ ಗುಂಪು ಸೇರುತ್ತಿರುವುದು, ಕೋವಿಡ್ ನಿಬಂಧನೆಗಳನ್ನು ನಿರ್ಲಕ್ಷ್ಯಿಸುವಂತಹ ಉದ್ದಟತನಗಳೂ ಕಾನೂನು ಪಾಲಕರಿಗೆ ಸವಾಲಾಗುತ್ತಿದೆ.
ಸಾರ್ವಜನಿಕರು ಅನಗತ್ಯವಾಗಿ ಪೇಟೆಗೆ ಬರಬಾರದೆಂದು ಜಿಲ್ಲಾಡಳಿತ ಪದೇಪದೇ ವಿನಂತಿಸುತ್ತಿದ್ದರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೇಟೆಯಲ್ಲಿ ಕಾಣಸಿಗುತ್ತಿದ್ದಾರೆ. ಹೋಟೆಲ್, ಅಂಗಡಿಗಳ ಪರಿಸರದಲ್ಲಿ ಗುಂಪುಸೇರುವುದೂ ಕಂಡುಬಂದಿದ್ದು ಸಾಮೂಹಿಕ ಹರಡುವಿಕೆಯ ಭೀತಿಗೆ ಕಾರಣವಾಗಿದೆ.
ಈ ಮಧ್ಯೆ ಕಂಟೋನ್ಮೆಂಟ್ ಪ್ರದೇಶಗಳ ಸಮೀಪದ ಗ್ರಾ.ಪಂ.ಗಳಲ್ಲಿ ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅಂಗಡಿ ಮುಗ್ಗಟ್ಟುಗಳು, ಹೋಟೆಲ್, ಮೆಡಿಕಲ್ ಮೊದಲಾದೆಡೆ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವ್ಯಾಪಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ವಿವಿಧ ಘಟಕ್ಗಳು ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ವ್ಯಾಪಾರಿ ಕೇಂದ್ರಗಳಿಗೆ ಸೂಚನೆ ನೀಡಿದ್ದು, ಜಾಗೃತಿ ಪತ್ರಗಳನ್ನೂ ವಿತರಿಸಿದೆ. ಆದರೆ ಗ್ರಾಹಕರಲ್ಲಿ ಅನೇಕರು ಕೋವಿಡ್ ನಿಬಂಧನೆಗಳನ್ನು ಅನುಸರಿಸಲು ಸಹಕರಿಸುತ್ತಿಲ್ಲ ಎಂಬ ದೂರುಗಳೂ ಹಲವೆಡೆಗಳಿಂದ ಕೇಳಿಬಂದಿದೆ.
(ಚಿತ್ರ ಮಾಹಿತಿ(1)ಬದಿಯಡ್ಕ ಪೇಟೆಯಲ್ಲಿ ಬುಧವಾರ ಜನರಿಂದ ಕಂಡುಬಂದ ಪೇಟೆ,2)ನೀರ್ಚಾಲು ಕೆಳಗಿನ ಪೇಟೆಯ ತರಕಾರಿ ಅಂಗಡಿಯೊಂದರಲ್ಲಿ ಹಾಕಲಾದ ಸೂಚನಾ ಫಲಕ.)



