ತಿರುವನಂತಪುರಂ: ಭತ್ಯೆಯೊಂದಿಗೆ ಸಂಬಳವನ್ನು ಕೂಡಲೇ ವಿತರಿಸುವಂತೆ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ಹಗಲು ರಾತ್ರಿ ಎನ್ನದೇ ವಿಶೇಷ ಕರ್ತವ್ಯ ನಿರ್ವಹಿಸುತ್ತಿರುವ 18 ಜ್ಯೂನಿಯರ್ ವೈದ್ಯರ ತಂಡವೊಂದು ಹೈಕೋರ್ಟ್ ಮೆಟ್ಟಿಲೇರಿದೆ.
ಟಿಎಸ್ ಕೃಷ್ಣ ಪ್ರಿಯಾ ಮತ್ತಿತರರು ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇತರ ವೈದ್ಯರ ಸಂಬಳ, ಡ್ಯೂಟಿ ಟೈಮ್, ಅರ್ಧ ದಿನ, ಕ್ವಾರಂಟೈನ್, ರಜೆ ಮತ್ತು ಮತ್ತಿತರ ಸೌಲಭ್ಯಗಳನ್ನು ಖಾತ್ರಿಪಡಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಜ್ಯೂನಿಯರ್ ವೈದ್ಯರುಗಳಿಗೆ ಸರ್ಕಾರ ಮಾಸಿಕ 42 ಸಾವಿರ ರೂ. ವೇತನವನ್ನು ನಿಗದಿಪಡಿಸಿದ್ದರೂ ಈವರೆಗೂ ನಯಾಪೈಸೆ ವಿತರಿಸಿಲ್ಲ.ಅಂತಹ ವೈದ್ಯರು ತಮ್ಮ ಜೀಬಿನಿಂದ ಹಣ ಖರ್ಚು ಮಾಡಿಕೊಂಡು ಹಗಲು ಇರುಳು ಎನ್ನದೇ ಕೋವಿಡ್-19 ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಅರ್ಜಿದಾರರು ತಿಳಿಸಿದ್ದಾರೆ.
ಅರ್ಜಿದಾರರು ಎದುರಿಸುತ್ತಿರುವ ಅನ್ಯಾಯ, ಅಸಮಾನತೆ ಕೇವಲ ಸಂಬಳಕ್ಕೆ ಸೀಮಿತವಾಗಿಲ್ಲ, ರಾಷ್ಟ್ರೀಯ ಆರೋಗ್ಯ ಮಿಷನ್, ರಾಷ್ಟ್ರೀಯ ಗ್ರಾಮಾಂತರ ಆರೋಗ್ಯ ಮಿಷನ್ ಮತ್ತು ರಾಜ್ಯ ಸೇವೆ ಅಡಿಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ಹೋಲಿಸಿದರೆ ಸರ್ಕಾರ ನಿಗದಿಪಡಿಸಿರುವ ಏಕಿಕೃತ ಪಾವತಿ ಯಾವುದಕ್ಕೂ ಸಕಾಗುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವುದೇ ಸೇವಾ ನಿಯಮಗಳು ಅಥವಾ ಷರತ್ತುಗಳಿಲ್ಲದೆ ಉದ್ಯೋಗ ಮಾಡುತ್ತಿದ್ದರೂ ಯಾವುದೇ ಪದನಾಮ ನೀಡಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.


