ನವದೆಹಲಿ: ಮಾಸ್ಕ್ ಧರಿಸದೇ, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಜನರಿಂದಲೇ ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ ಮಂಗಳವಾರ ಬೇಸರ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾತನಾಡಿದ ಐಸಿಎಂಆರ್ ನಿರ್ದೇಶಕ ಬಲರಾಂ ಭಾರ್ಗವ ಅವರು, ದೇಶದಲ್ಲಿ ಕೊರೋನಾ ಸೋಂಕು ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೆ ಸೋಂಕು ಹೆಚ್ಚಳಕ್ಕೆ ಕೆಲವೇ ವ್ಯಕ್ತಿಗಳು ಕಾರಣ. ಅವರು ಕಿರಿಯವರೇ, ಹಿರಿಯವರೇ ಎಂದು ನಾನು ಹೇಳುವುದಿಲ್ಲ, ಮಾಸ್ಕ್ ಹಾಕದೆ, ಕೊರೊನಾ ಎಚ್ಚರಿಕೆಯ ಮಾರ್ಗಸೂಚಿಗಳನ್ನು ಪಾಲಿಸದೆ ಇರುವವರು ಸೋಂಕು ಹರಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಭಾರತ ತನ್ನ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದೆ. ಭಾರತದಲ್ಲಿ ಕ್ರಮೇಣ ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆಗಸ್ಟ್ 21ರ ಹೊತ್ತಿಗೆ ದೇಶದಲ್ಲಿ ಒಂದೇ ದಿನ 1 ಮಿಲಿಯನ್ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದು ಈ ವರೆಗಿನ ಒಂದು ದಿನದ ಗರಿಷ್ಠ ಸೋಂಕು ಪರೀಕ್ಷಾ ಪ್ರಮಾಣವಾಗಿದೆ ಎಂದು ಹೇಳಿದರು.
ಜೊತೆಗೆ, ಕೋವಿಡ್ ಲಸಿಕೆ ಕುರಿತು ಮಾತನಾಡಿದ ಅವರು, ದೇಶದಲ್ಲಿ ಮೂರು ಕೋವಿಡ್ ಲಸಿಕೆಗಳು ಕ್ಲಿನಿಕಲ್ ಹಂತದಲ್ಲಿವೆ. ಭಾರತ್ ಬಯೋಟೆಕ್ ಮತ್ತು ಝೈಡಸ್ ಕ್ಯಾಡಿಲಾ ಲಸಿಕೆಗಳು ಮೂರನೇ ಹಂತದಲ್ಲಿವೆ. ಸೀರಂ ಲಸಿಕೆ ಮೊದಲ ಹಂತ ಪೂರೈಸಿ ಎರಡನೇ ಹಂತದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

