ಮಂಜೇಶ್ವರ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ಮುಚ್ಚಿರುವ ರಸ್ತೆಗಳನ್ನು ಸಂಚಾರ ಮುಕ್ತಗೊಳಿಸುವಂತೆ ರಾಜ್ಯ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
ಕೇರಳ ಮತ್ತು ಕರ್ನಾಟಕದ ನಡುವೆ ನಾಗರಿಕ ಪ್ರಯಾಣ ಮತ್ತು ಸರಕುಗಳ ಸಾಗಣೆಗೆ ಅನುಕೂಲವಾಗುವಂತೆ ಗುರುವಾರದಿಂದ ನಾಲ್ಕು ರಸ್ತೆಗಳಲ್ಲಿ ಸಂಚಾರಕ್ಕೆ ತೆರವುಗೊಳಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಕಾಸರಗೋಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಕೇರಳ ಮತ್ತು ಕರ್ನಾಟಕದ ನಡುವಿನ 12 ಅಂತರರಾಜ್ಯ ರಸ್ತೆಗಳ ಮೂಲಕ ಅಂತರರಾಜ್ಯ ಪ್ರಯಾಣದ ನಿಷೇಧವನ್ನು ತೆರವುಗೊಳಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಕೇಂದ್ರದ ಅನ್ ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಶ್ರೀಕಾಂತ್ ಅವರ ಸಲಹೆಗಾರ ವಿ ಸಜಿತ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ವಾಹನಗಳ ಸಂಚಾರದ ನಿಷೇಧವು ಜಿಲ್ಲೆಯ ಜನರಿಗೆ ತೊಂದರೆಗಳನ್ನು ಸೃಷ್ಟಿಸುತ್ತಿತ್ತು ತೊಂದರೆಗೆ ಗುರಿಯಾಗುವ ಪ್ರದೇಶಗಳನ್ನು ಗುರುತಿಸಲಾಗಿದೆಯೆ ಎಂದು ಜಿಲ್ಲೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅಂತಹ ಅನಾಹುತಗಳನ್ನು ತಡೆಗಟ್ಟುವ ಕ್ರಮಗಳನ್ನು ಜಿಲ್ಲಾ ಮತ್ತು ಸ್ಥಳೀಯ ಅಧಿಕಾರಿಗಳು ತೆಗೆದುಕೊಳ್ಳಬೇಕಾಗಿದೆ ಎಂದು ಸರ್ಕಾರದ ಪರ ಅರ್ಜಿದಾರರು ಹೇಳಿದ್ದರು. ರಾಜ್ಯದ ಗಡಿ ದಾಟಲು ಇಚ್ಚಿಸುವವರು ಪಾಸ್ ಪಡೆಯಬೇಕು. ಕೇಂದ್ರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಸಂಚಾರ ನಡೆಸುವುದಕ್ಕೆ ಗೆ ನಿಬರ್ಂಧಗಳಿವೆ ಎಂದು ಇದರ ಅರ್ಥವಲ್ಲ. ಆಗಸ್ಟ್ 25 ರಂದು ದಕ್ಷಿಣ ಕನ್ನಡದಲ್ಲಿ 247 ಮತ್ತು ಹತ್ತಿರದ ಕಾಸರಗೋಡಿನಲ್ಲಿ 99 ಕೋವಿಡ್ ಪ್ರಕರಣ ವರದಿಯಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಎರಡು ರಾಜ್ಯಗಳ ನಡುವೆ ಪ್ರಯಾಣಿಸಲು ಎನ್ಎಚ್ -47 ಮಾತ್ರವೇ ಮುಕ್ತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕರ್ನಾಟಕಕ್ಕೆ ಹೋಗುವ ಇತರ ನಾಲ್ಕು ರಾಜ್ಯ ಹೆದ್ದಾರಿಗಳಾದ ಜಾಲ್ಸೂರು, ಪಾಣತ್ತೂರು, ಮಾಣಿಮೂಲೆ, ಪೆರ್ಲ ಗಡಿಗಳಲ್ಲಿ ವಿಧಿಸಲಾಗಿರುವ ಸಂಚಾರ ನಿಷೇಧವನ್ನು ಗುರುವಾರದಿಂದ ತೆರವುಗೊಳಿಸುವಂತೆ ಕೇರಳ ಉಚ್ಚ ನ್ಯಾಯಾಲಯ ಸೂಚಿಸಿದೆ.
ಆದೇಶದ ಬೆನ್ನಿಗೆ ಡಿಸಿ ಕಾರ್ಬಾರ್!:
ಆದೇಶ ಹೊರ ಬೀಳುತ್ತಿರುವಂತೆ ಕಾಸರಗೋಡು ಜಿಲ್ಲಾಧಿಕಾರಿಗಳು ಪ್ರತ್ಯೇಕ ಆದೇಶ ಹೊರಡಿಸಿ ಆಂಟಿಜನ್ ಪರೀಕ್ಷೆಗೊಳಪಡಿಸಿ ಅಂತರ್ ರಾಜ್ಯ ಸಂಚಾರ ನಡೆಸಬಹುದೆಂಬ ನಿರ್ಣಯ ಹೊರಡಿಸಿದರು. ಆಂಟಿಜನ್ ಪರೀಕ್ಷೆಯನ್ನು ಗಡಿ ಕೊನೆಯದಾಗಿ ಹಾದುಹೋಗುವ ಸ್ಥಳೀಯಾಡಳಿತ ನಿರ್ವಹಿಸಬೇಕೆಂದೂ ಹೇಳಿರುವರು. ಎಂದರೆ ಈ ಆದೇಶ ಈ ಹಿಂದಿನ ಸಂಚಾರ ನಿಷೇಧ ನಿರ್ಬಂಧಕ್ಕೆ ಸಮವಾಗಿರುವ ಆದೇಶವೇ ಆಗಿದೆ ಎಂಬಂತೆ ತೋರ್ಪಟ್ಟಿದೆ.
ಗುರುವಾರ ಯಾವ ಗಡಿಗಳಲ್ಲೂ ಮುಕ್ತ ಸಂಚಾರಕ್ಕೆ ಅನುವು ಮಾಡಿಲ್ಲ. ಎಲ್ಲಾ ಕಡೆಗಳಲ್ಲೂ ಈ ಹಿಂದಿನಂತೆಯೇ ನಿಯಂತ್ರಣಗಳು ಮುಂದುವರಿದಿವೆ. ಜಾಲ್ಸೂರು ರಸ್ತೆಯಲ್ಲಿ ಮಾತ್ರ ರಸ್ತೆ ತಡೆ ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ನಿಷ್ಪ್ರಯೋಜಕವಾಗಿದೆ.
ಗುರುವಾರ ಬೆಳಿಗ್ಗೆ ಮಂಜೇಶ್ವರ ಗ್ರಾ.ಪಂ.ವ್ಯಾಪ್ತಿಯ ಹಲವರು ಆಧಾರ್ ಕಾರ್ಡ್ ತೋರಿಸಿ ಮಂಗಳೂರಿಗೆ ತೆರಳಿರುವುದಾಗಿ ತಿಳಿದುಬಂದಿದೆ.
ಕುತೂಹಲಕ್ಕೆ ಕಾರಣವಾದ ಹಸು:
ಈ ಮಧ್ಯೆ ಅಡ್ಕಸ್ಥಳ ಗಡಿಯಲ್ಲಿ ಗುರುವಾರ ಹಸುವೊಂದು ರಸ್ತೆ ತಡೆಯನ್ನು ಬಾಯಲ್ಲಿ ಎಳೆದು ತೆರವುಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಹಸು ಕೂಡಾ ಬೇಸತ್ತಿದೆ ಎಂದು ಹೇಳಲಾಗಿದೆ.


