ಕಾಸರಗೋಡು: ಪರಿಸರ, ಜಲ ಸಂರಕ್ಷಣೆ ಮತ್ತು ಕೃಷಿ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಿಂದ ಗಮನಾರ್ಹವಾಗಿ ಗುರುತಿಸಲ್ಪಟ್ಟಿರುವ ಪಿಲಿಕ್ಕೋಡ್ ಪಂಚಾಯತಿ ಈಗ ಬಂಜರು ರಹಿತ ಪಂಚಾಯತಿಯಾಗಿ ಮತ್ತೆ ಸುದ್ದಿಯಲ್ಲಿದೆ. ಈ ಬಗ್ಗೆ ರಾಜ್ಯ ಕಂದಾಯ-ವಸತಿ ಸಚಿವ ಇ.ಚಂದ್ರಶೇಖರನ್ ಅವರು ಆನ್ ಲೈನ್ನಲ್ಲಿ ಅಧಿಕೃತ ಪ್ರಕಟಣೆ ನೀಡಿದ್ದಾರೆ.
ಹರಿತ ಕೇರಳ ಮಿಷನ್ ಸಹಯೋಗದೊಂದಿಗೆ ಪಿಲಿಕ್ಕೋಡ್ ಪಂಚಾಯತಿ ವಿವಿಧ ಚಟುವಟಿಕೆಗಳೊಂದಿಗೆ ಜನರ ಮುಕ್ತ ಸಹಭಾಗಿತ್ವದೊಂದಿಗೆ ಈ ಯಶಸ್ವಿಗೆ ಕಾರಣವಾಗಿದೆ. ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ ಈ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಪಿಲಿಕ್ಕೋಡ್ ಪಂಚಾಯತಿಯ ಇನ್ನೊಂದು ವಿಶೇಷತೆಯೆಂದರೆ ರಾಷ್ಟ್ರಮಟ್ಟದಲ್ಲೇ ಮೆಚ್ಚುಗೆ ಪಡೆದ ಪಿಲಮೆಂಟ್ ರಹಿತ ಬಲ್ಬ್ ಗಳ ಏಕೈಕ ಪಂಚಾಯತಿ ಕೂಡಾ ಆಗಿರುವುದು ಇಲ್ಲಿ ಉಲ್ಲೇಖಾರ್ಹ.
ಬಂಜರು ರಹಿತ ಪಂಚಾಯತಿ ಘೋಷಣೆಯ ಸರಳ ಸಮಾರಂಭದಲ್ಲಿ ಪಿಲಿಕ್ಕೋಡ್ ಗ್ರಾಮ ಪಂಚಾಯತಿ ಅಧ್ಯಕ್ಷ ಟಿ.ವಿ.ಶ್ರೀಧರನ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅತಿಥಿಯಾಗಿ ಹರಿತ ಕೇರಳ ಮಿಷನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಟಿ.ಎನ್.ಸೀಮಾ ಭಾಗವಹಿಸಿದ್ದರು. ಪಿಲಿಕೋಡ್ ಕೃಷಿ ಅಧಿಕಾರಿ ಟಿ.ವಿ.ಜಲೇಶನ್ ವರದಿ ಮಂಡಿಸಿದರು. ಜಿಲ್ಲಾ ಕೃಷಿ ಉಪನಿರ್ದೇಶಕ ಆರ್.ಮೀನಾರಾಣಿ, ಹರಿತ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಸುಬ್ರಮಣಿಯನ್, ಪಿಲಿಕ್ಕೋಡ್ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪಿ.ಶೈಲಜಾ ಮತ್ತು ಪಿಲಿಕೋಡ್ ಗ್ರಾಮ ಪಂಚಾಯತಿ ಕಾರ್ಯದರ್ಶಿ ಕೆ.ರಮೇಶನ್ ಅವರು ಶುಭಹಾರೈಸಿ ಮಾತನಾಡಿದರು.
ಪಿಲಿಕ್ಕೋಡ್ - ಸುಭಿಕ್ಷ ಕೇರಳ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸಿದ ಪಂಚಾಯಿತಿ: ಕಂದಾಯ ಸಚಿವ
ಹರಿತ ಕೇರಳ ಮಿಷನ್ ಮತ್ತು ಸುಭಿಕ್ಷ ಕೇರಳ ಯೋಜನೆ ಮುಂದಿಟ್ಟ ಪುನರುಜ್ಜೀವನ ಸಾಧ್ಯತೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಪಿಲಿಕ್ಕೋಡ್ ಪಂಚಾಯತಿ ಆಡಳಿತ ಸಮಿತಿ ಜನರ ದೃಷ್ಟಿಯಲ್ಲಿ ಸುಸ್ಥಿರ ಅಭಿವೃದ್ಧಿಗೆ ಒಂದು ಪೂರ್ವನಿದರ್ಶನವನ್ನು ನೀಡಿದ್ದಾರೆ ಎಂದು ಕಂದಾಯ ಸಚಿವ ಇ ಚಂದ್ರಶೇಖರನ್ ಹೇಳಿದರು. ಪಿಲಿಕೋಡ್ ಪಂಚಾಯತಿಯನ್ನು ತ್ಯಾಜ್ಯ ಮುಕ್ತ ಪಂಚಾಯತಿ ಎಂದು ಸಚಿವರು ಘೋಷಿಸಿದರು. ರಾಜ್ಯಾದ್ಯಂತ ಸುಭಿಕ್ಷ ಕೇರಳ ಯೋಜನೆಯ ಭಾಗವಾಗಿ ಪಾಳುಭೂಮಿ ಭೂಮಿಯನ್ನು ರೈತರು ಮತ್ತು ಸ್ಥಳೀಯ ಯುವಕರ ತಂಡ ಹಸಿರು ಭೂಮಿಯಾಗಿ ಪರಿವರ್ತಿಸಿದೆ. ಇದರ ಆಧಾರದ ಮೇಲೆ, ಈ ಕೋವಿಡ್ ಅವಧಿಯಲ್ಲಿ ನಮ್ಮ ಕೃಷಿ ಕ್ಷೇತ್ರವು ಹೊಸ ಜೀವನ ಸಾಧ್ಯತೆಗೆ ತೆರೆದುಕೊಂಡಿದೆ. ನಮ್ಮ ಭೂಮಿ ಮತ್ತು ಪ್ರಕೃತಿಯು ಗ್ರಾಹಕ ಸಂಸ್ಕøತಿಯಿಂದ ಸೃಷ್ಟಿಸಲ್ಪಟ್ಟ ವಿಕೃತ ಅಭಿವೃದ್ಧಿ ಪರಿಕಲ್ಪನೆಗಳಿಂದ ಗಾಯಗೊಂಡಿದೆ. ನಮ್ಮ ಹೊಲ ಮತ್ತು ಹಿತ್ತಲುಗಳು ನಮ್ಮಿಂದ ದೂರ ಸರಿದಾಗ ನಾವೊಂದು ಸಂಸ್ಕೃತಿಯನ್ನೇ ಕಳೆದುಕೊಂಡೆವು. ಕೃಷಿ ಸಂಸ್ಕøತಿಯಿಂದ ದೂರ ಸರಿದ ಪರಿಣಾಮ ವ್ಯಾಪಾರೀಕರಣ ಮತ್ತು ಸ್ವಾರ್ಥ ಲಾಲಸೆಗಳಿಂದ ಹಿತವಾಗಿದ್ದ ಬದುಕು ಪ್ರಕೃತಿಯ ವಿಕೃತಿಗೊಳಿಸಿದ್ದರ ಪರಿಣಾಮ ಅಹಿತವಾಗಿ ಪರಿಣಮಿಸಿತು. ಕೋವಿಡ್ ಸಂಕಷ್ಟದ ಹೊರತಾಗಿಯೂ, ಪಿಲಿಕೋಡ್ ಗ್ರಾಮವು ನವೀನ ಚಿಂತನೆಗಳ ಅನುಷ್ಠಾನದ ಮೂಲಕ ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಭರವಸೆಯ ಬಿಸಿಲಿನಲ್ಲಿ ಆರೈಕೆಯ ಬೀಜಗಳನ್ನು ಬಿತ್ತಲಾಗುತ್ತಿದೆ.
ಪಿಲಿಕ್ಕೋಡ್ ನ ಮಾದರಿ ಚಟುವಟಿಕೆಗಳು ಭವಿಷ್ಯದ ಭರವಸೆ:ಡಾ.ಎನ್.ಸೀಮಾ
ಸುರಕ್ಷಿತ ಆಹಾರದ ಉದ್ದೇಶದಿಂದ ರಾಜ್ಯ ಸರ್ಕಾರ ಪ್ರಾರಂಭಿಸಿರುವ ಸುಭಿಕ್ಷ ಕೇರಳ ಯೋಜನೆಯಲ್ಲಿ ಪಿಲಿಕ್ಕೋಡ್ ಪಂಚಾಯತಿ ವಿಭಿನ್ನ ಮಾದರಿಗಳನ್ನು ರಚಿಸಿದೆ ಎಂದು ಹರಿತ ಕೇರಳ ಮಿಷನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎನ್.ಸೀಮಾ ಹೇಳಿದರು. ಪಿಲಿಕ್ಕೋಡ್ ಪಂಚಾಯಿತಿಯನ್ನು ಸುರಕ್ಷಿತ ಆಹಾರ ಬೆಳೆವ ಸತ್ವಯುತ ಭೂಮಿಯಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಈಗ ಮಾಡಿರುವ ಸಾಧನೆ ಮಾರ್ಗದರ್ಶಿಯಾಗಿ ತೋರಿಸುತ್ತಿದೆ. ಕೋವಿಡ್ ಬಳಿಕದ ಕಾಲಘಟ್ಟದಲ್ಲಿ ಹೇಗೆ ಬದುಕಬೇಕು ಎಂಬ ಬಗ್ಗೆ ನಮಗೆ ಆತಂಕ ಇದ್ದಿದ್ದು ಹೌದಾದರೂ ಪಿಲಿಕ್ಕೋಡ್ ಗ್ರಾಮ ಪಂಚಾಯಿತಿಯ ಚಟುವಟಿಕೆಗಳು ಖಂಡಿತವಾಗಿಯೂ ಎಲ್ಲೆಡೆಗಳಿಗೂ ಭರವಸೆಯ ಬೆಳಕನ್ನೇ ನೀಡಿದೆ. ಜನರು ಮತ್ತು ಸಮಾಜವು ಆರೋಗ್ಯವಾಗಿರಲು, ಅವರು ಆರೋಗ್ಯಕರ ಆಹಾರವನ್ನು ಸೇವಿಸುವ ವಾತಾವರಣ ಇರಬೇಕು. ಈ ನಿಟ್ಟಿನಲ್ಲಿ ಪಿಲಿಕ್ಕೋಡ್ ನಮಗೆ ಒಂದು ಪ್ರದೇಶದ ಸಾಂಪ್ರದಾಯಿಕ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವ, ಪರಿಸರ ಸ್ವಚ್ಚತೆ ಮತ್ತು ಅಭಿವೃದ್ಧಿಯ ಮಾದರಿಯನ್ನು ನೀಡುತ್ತಿದೆ.


