ಕುಂಬಳೆ: ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಸೋಮವಾರ ರಾತ್ರಿ ಬರ್ಬರವಾಗಿ ಹತ್ಯೆಗೈಯ್ಯಲ್ಪಟ್ಟ ಹರೀಶ್(38) ಘಟನೆಗೆ ಸಂಬಂಧಿಸಿ ಮುಖ್ಯ ಆರೋಪಿಯೆಂದು ಸಂಶಯಿಸಲಾಗುವ ಶ್ರೀಕುಮಾರ್(26)ಎಂಬಾತನನ್ನು ಕುಂಬಳೆ ಸಿ.ಐ.ಪ್ರಮೋದ್ ನೇತೃತ್ವದ ಪೋಲೀಸ್ ತಂಡ ಬಂಧಿಸಿದೆ.
ಸ್ತ್ರೀ ಸಂಬಂಧಿ ವಿಷಯ ಪ್ರಕೋಪಕ್ಕೆ ತಿರುಗಿ ಕೊಲೆಯಲ್ಲಿ ಪರ್ಯವಸಾನಗೊಂಡಿತೆಂದು ಪೋಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹರೀಶ್ ಕಳೆದ 15 ವರ್ಷಗಳಿಂದ ನಾಯ್ಕಾಪಿನಲ್ಲಿ ಕಾರ್ಯವೆಸಗುವ ಭಗವತಿ ಆಯಿಲ್ ಮಿಲ್ಸ್ ನಲ್ಲಿ ನೌಕರನಾಗಿದ್ದನು. ಕಳೆದ ಸೋಮವಾರ ರಾತ್ರಿ ಮಿಲ್ ನಿಂದ ಮರಳಿ ಮನೆಗೆ ತೆರಳುತ್ತಿದ್ದಾಗ ಮನೆಯಿಂದ ಅನತಿ ದೂರದಲ್ಲಿ ರಸ್ತೆಬದಿ ಬರ್ಬರವಾಗಿ ಹತ್ಯೆಗೈಯ್ಯಲ್ಪಟ್ಟ ಸ್ಥಿತಿಯಲ್ಲಿ ಹರೀಶನನ್ನು ಪತ್ತೆಹಚ್ಚಲಾಗಿತ್ತು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆತನನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಧ್ಯೆ ಕೊನೆಯುಸಿರೆಳೆದನು. ಆದರೆ ಸಾಧು ಸ್ವಭಾವದ ಹರೀಶ್ ನನ್ನು ಯಾರು, ಯಾಕಾಗಿ ಕೊಲೆಗೈದರೆಂದು ಆರಂಭದಲ್ಲಿ ಸಾರ್ವಜನಿಕರ ಆಶ್ಚರ್ಯಕ್ಕೆ ಕಾರಣವಾಗಿತ್ತು.
ಈ ಮಧ್ಯೆ ಮಂಗಳವಾರ ಸಂಜೆ ಕುಂಬಳೆ ಪರಿಸರದಲ್ಲಿ ಹದಿಹರೆಯದ ಯುವಕರಾದ ರೋಶನ್(18) ಹಾಗೂ ಮಧು(19)ಎಂಬವರು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದ್ದು, ಹರೀಶನ ಕೊಲೆಗೂ ಇವರ ಆತ್ಮಹತ್ಯೆಗೂ ಸಂಬಂಧಗಳಿರುವುದು ಖಾತ್ರಿಪಡಿಸಲಾಗಿತ್ತು.
ಈ ಮಧ್ಯೆ ಮುಖ್ಯ ಆರೋಪಿ ಶ್ರೀಕುಮಾರನನ್ನು ಬಂಧಿಸಲಾಗಿದ್ದು ಕೊಲೆ, ಎರಡು ಆತ್ಮಹತ್ಯೆಗಳಿಗೆ ಸಂಬಂಧಿಸಿ ಇನ್ನಷ್ಟು ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ಪ್ರೇಮಪ್ರಕರಣ ಅಡಗಿರುವುದು ಖಚಿತವಾಗಿದ್ದು, ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ಯುವ ಸಮೂಹದ ಅಪ್ರಬುದ್ದತೆಯ ಪರಾಕಾಷ್ಠೆಗೆ ಕುಪಿತತೆ ವ್ಯಕ್ತಪಡಿಸಿದ್ದಾರೆ.


