ನವದೆಹಲಿ : ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ತನ್ನ ಸ್ಥಾನವನ್ನು ಸ್ಪಷ್ಟಪಡಿಸಿ ಅಧಿಕಾರವನ್ನು ಹೊಂದಿರುವ ಅಫಿಡವಿಟ್ ಅನ್ನು ಸಲ್ಲಿಸಬೇಕಾಗಿತ್ತು. ಆದರೆ ಅದರ ಬದಲಾಗಿ ಕೇಂದ್ರ ಸರ್ಕಾರವು ಆರ್ಬಿಐನ ನಿರ್ಧಾರದ ಹಿಂದೆ ಉಳಿದಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಬಡ್ಡಿಯನ್ನು ಮನ್ನಾ ಮಾಡಬಹುದೇ ಅಥವಾ ಮೊರಟೋರಿಯಂ ಸಂದರ್ಭದಲ್ಲಿ ಗಳಿಸಿದ ಬಡ್ಡಿಗೆ ಬಡ್ಡಿ ವಿಧಿಸುವುದನ್ನು ಸ್ಥಗಿತಗೊಳಿಸಬಹುದೇ ಎಂಬ ಬಗ್ಗೆ ಸರ್ಕಾರದ ತೀರ್ಮಾನದ ಅಫಿಡವಿಟ್ ಅನ್ನು ಸರಿಯಾದ ಸಮಯದಲ್ಲಿ ನೀಡದೆ ಈ ಪ್ರಕರಣವನ್ನು ದೀರ್ಘಕಾಲದಿಂದ ಮುನ್ನಡೆಸುತ್ತಾ ಬರುತ್ತಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ವಿರುದ್ದ ಬುಧವಾರ ವಾಗ್ದಾಳಿ ನಡೆಸಿ, ''ನಿಮ್ಮ ಲಾಕ್ಡೌನ್ನಿಂದಾಗಿ ಈ ಸಮಸ್ಯೆಯನ್ನು ಸೃಷ್ಟಿ ಮಾಡಲಾಗಿದೆ. ಈಗ ಯೂನಿಯನ್ ಆಫ್ ಇಂಡಿಯಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹಿಂದೆ ಅಡಗಿ ಕೂತಿದೆ'' ಎಂದು ಹೇಳಿದೆ.
' 'ಕೊರೊನಾದ ಈ ಸಂದರ್ಭದಲ್ಲಿ ಬರೀ ನಿಮ್ಮ ವ್ಯವಹಾರವನ್ನೇ ನೋಡಿಕೊಂಡತರೆ ಸಾಲದು, ಈ ಸಂದರ್ಭದಲ್ಲಿ ಜನರ ಸ್ಥಿತಿಯನ್ನು ಕೂಡಾ ನೋಡಬೇಕು, ಮೊದಲು ಪರಿಹಾರದತ್ತ ಗಮನ ಹರಿಸಿ'' ಎಂದು ನ್ಯಾಯಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಹೇಳಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ ಸಾಲ ನಿಷೇಧಕ್ಕೆ ಬ್ಯಾಂಕ್ಗಳು ಬಡ್ಡಿ ವಿಧಿಸುತ್ತಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಬಡ್ಡಿಯನ್ನು ಮನ್ನಾ ಮಾಡಬಹುದೇ ಅಥವಾ ಮೊರಟೋರಿಯಂ ಸಂದರ್ಭದಲ್ಲಿ ಗಳಿಸಿದ ಬಡ್ಡಿಗೆ ಬಡ್ಡಿ ವಿಧಿಸುವುದನ್ನು ಸ್ಥಗಿತಗೊಳಿಸಬಹುದೇ ಎಂಬ ಬಗ್ಗೆ ಅಫಿಡವಿಟ್ ಅನ್ನು ಸಲ್ಲಿಸುವಂತೆ ತಿಳಿಸಿತ್ತು. ಆದರೆ ಅಫಿಡವಿಟ್ ವಿಳಂಬವಾದ ಕಾರಣ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಸುಪ್ರೀಂ ಕೋರ್ಟ್ ಸರ್ಕಾರ ಕೂಡಲೇ ತನ್ನ ವಿಳಂಬವಾದ ಅಫಿಡವಿಟ್ ಸಲ್ಲಿಸಲು ಸೂಚಿಸಿದ್ದು ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದೆ.