ತಿರುವನಂತಪುರ: ರಾಜ್ಯ ಸೆಕ್ರಟರಿಯೇಟ್ ನಲ್ಲಿ ಮಂಗಳವಾರ ಸಂಜೆ ಆಕಸ್ಮಿಕ ಅಗ್ನಿ ಅವಘಡ ಉಂಟಾಯಿತು. ಸಾರ್ವಜನಿಕ ಆಡಳಿತ ಇಲಾಖೆ ಇರುವ ಉತ್ತರ ಸ್ಯಾಂಡ್ವಿಚ್ ಬ್ಲಾಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಘಟನೆಯಲ್ಲಿ ದಾಖಲೆ ಪತ್ರಗಳ ಫೈಲ್ಗಳು ನಶಿಸಿಹೋಗಿವೆ. ಆದರೆ ಜೀವಹಾನಿಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಫೈಲ್ಗಳ ಜೊತೆಗೆ, ಕಂಪ್ಯೂಟರ್ ಗಳಿಗೂ ಹಾನಿ ಸಂಭವಿಸಿದೆ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿಯನ್ನು ನಂದಿಸಿದರು. ಕಂಪ್ಯೂಟರ್ನಲ್ಲಿನ ಶಾರ್ಟ್ ಸಕ್ರ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಆದರೆ ಯಾವ ದಾಖಲೆ ಪೈಲ್ ಗಳು ನಶಿಸಿವೆ ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿರುವಂತೆ ನೌಕರರನ್ನು ಕಟ್ಟಡದಿಂದ ಹೊರ ಕಳಿಸಲಾಯಿತು. ಸೆಕ್ರೆಟರಿಯೇಟ್ ಸಿಬ್ಬಂದಿ ಸಂಘಟನೆಯ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ, ಬೆಂಕಿಯಿಂದ ಹಲವಾರು ಫೈಲ್ಗಳು ನಾಶವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ರಾಜ್ಯ ಸರ್ಕಾರ ವಂಚನೆಗಳ ಮಹಾ ಸಾಗರದಲ್ಲಿ ಸಿಲುಕಿರುವಾಗ ಸಂಭಿಸಿರುವ ಅಗ್ನಿ ಅವಘಡ ಪೂರ್ವ ಯೋಜಿತ ಎಂದು ಪ್ರತಿಪಕ್ಷ ಯುಡಿಎಫ್ ಸಂಶಯ ವ್ಯಕ್ತಪಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರೂ ಬೆಂಕಿ ಅವಘಡ ಆಕಸ್ಮಿಕವಲ್ಲ. ಸರ್ಕಾರದ ವಿರುದ್ದ ಎದ್ದಿರುವ ಹಲವು ಆರೋಪಗಳಿಂದ ಮುಕ್ತವಾಗಲು ಸಾಕ್ಷಿ ನಾಶಪಡಿಸುವ ತಂತ್ರ ಎಂದು ಆರೋಪಿಸಿದ್ದಾರೆ. ಆದರೆ, ಯಾವುದೇ ಪ್ರಮುಖ ಫೈಲ್ಗಳು ಕಳೆದುಹೋಗಿಲ್ಲ ಎಂದು ಸಾರ್ವಜನಿಕ ಆಡಳಿತ ಇಲಾಖೆ ತಿಳಿಸಿದೆ. ಈ ಬಗ್ಗೆ ಕಾರ್ಯದರ್ಶಿ ಮಾಹಿತಿ ನೀಡಿರುವರು. ಸಂಜೆ 6ರ ವೇಳೆಗೆ ಪ್ರತಿಪಕ್ಷ ಯುಡಿಎಫ್, ಬಿಜೆಪಿ ಮುತ್ತಿಗೆ ನಡೆಸಿತು. 500ಕ್ಕಿಂತಲೂ ಮಿಕ್ಕಿದ ಕಾರ್ಯಕರ್ತರು ಸೆಕ್ರಟರಿಯೇಟ್ ಒಳನುಗ್ಗಲು ಯತ್ನಿಸಿದಾಗ ಗೌಜಿ ಗದ್ದಲ ಏರ್ಪಟ್ಟಿತು. ಪೋಲೀಸರು ಮುಖಂಡರನ್ನು ಬಂಧಿಸಿದರು. ಪ್ರಧಾನ ಕಾರ್ಯದರ್ಶಿ ನೇರವಾಗಿ ಧಾವಿಸಿ ಬಂದು ಪ್ರತಿಭಟನೆಕಾರರನ್ನು ಸಮಧಾನ ಪಡಿಸಲು ಯತ್ನಿಸಿದರು.


