ಕುಂಬಳೆ: ಸಾರಡ್ಕ ಮತ್ತು ಮಂಜೇಶ್ವರ ಗಡಿ ಭಾಗದಲ್ಲಿ ಅಂತರ್ ರಾಜ್ಯ ರಸ್ತೆಗೆ ಹಾಕಿರುವ ಮಣ್ಣು ತೆಗೆದಿರುವುದು ಕರ್ನಾಟಕ ಸರ್ಕಾರ, ಹಾಗೂ ದ.ಕ ಜಿಲ್ಲಾಡಳಿತದ ನಿರ್ಣಯ. ಇದು ಬಿಜೆಪಿ ಕಾಸರಗೋಡು ನೇತಾರರ ನಿರಂತರವಾದ ಶ್ರಮದ ಭಾಗವಾಗಿ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಗಡಿ ತೆರವಿನ ಬಗ್ಗೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ನಮಗೆ ಈ ಮೊದಲೇ ಭರವಸೆ ಕೊಟ್ಟಿದ್ದರು. ಈ ವಿಚಾರ ಎಲ್ಲಾ ಜನರಿಗೂ ಗೊತ್ತಿರುವ ವಿಚಾರ. ನಂತರ ಕೇರಳ ತನ್ನ ಗಡಿ ಭಾಗದಲ್ಲಿ ಮಣ್ಣು ಹಾಕಿ ಮುಚ್ಚಿದಾಗ ಅದರ ವಿರುದ್ಧ ಕೇರಳ ಹೈಕೋರ್ಟ್ ನ ಮೆಟ್ಟಿಲೇರಿರುವುದು ಕಾಸರಗೋಡು ಜಿಲ್ಲಾ ಬಿಜೆಪಿಯೇ ಹೊರತು ಇಲ್ಲಿನ ಶಾಸಕರು, ಸಂಸದರು ಅಲ್ಲ ಎಂಬುವುದು ಸಂಕಷ್ಟ ಅನುಭವಿಸುವ ಜನತೆಗೆ ತಿಳಿದ ವಿಚಾರ ಎಂದು ಬಿಜೆಪಿ ತಿಳಿಸಿದೆ.
ಗಡಿಯಲ್ಲಿ ಮಣ್ಣು ಹಾಕಿದ ಕೇರಳದ ಕ್ರಮವನ್ನು ಖಂಡಿಸಿ ಸ್ವಾತಂತ್ರ್ಯೋತ್ಸವದ ದಿನ ಮಣ್ಣು ತೆಗೆದು ಬಹಿರಂಗ ಹೋರಾಟಕ್ಕೆ ಚಾಲನೆ ನೀಡಿದ್ದು ಕೂಡ ಯುವಮೋರ್ಚಾ ಎನ್ನುವುದೂ ಜನತೆಗೆ ತಿಳಿದ ಸತ್ಯ. ಅದಕ್ಕೆ ಇಲ್ಲಿನ ಕಾಂಗ್ರೆಸ್ ಅಥವಾ ಇತರರ ಮಾನ್ಯತೆ ಅಗತ್ಯವಿಲ್ಲ. ಜನರ ಬಗ್ಗೆ ಕಾಳಜಿ ಇದ್ದಲ್ಲಿ ಈ ಮೊದಲೇ ಇಲ್ಲಿನ ಸಂಸದರು, ಶಾಸಕರು ಮತ್ತು ಕಾಸರಗೋಡು ಜಿಲ್ಲೆಯ ಉಸ್ತುವಾರಿ ಸಚಿವ ಚಂದ್ರಶೇಖರನ್ ರವರು ಕರ್ನಾಟಕ ರಾಜ್ಯ ಸರ್ಕಾರದ ಮನವೊಲಿಸಬೇಕಾಗಿತ್ತು. ಅದು ಬಿಟ್ಟು ರಾಜಕೀಯ ನಾಟಕವಾಡಿ ಇಲ್ಲಿನ ಜನತೆಯನ್ನು ವಂಚಿಸುತ್ತಿರುವುದು ಹೇಯಕರ ಎಂದು ಬಿಜೆಪಿ ಆರೋಪಿಸಿದೆ.
ಕೋವಿಡ್ ನಿಬಂಧನೆಗಳು ಜಾರಿಗೊಂಡಲ್ಲಿಂದ ಜನರಿಗೋಸ್ಕರ ಹಲವಾರು ಹೋರಾಟ ಮಾಡಿ, ಅಕ್ಕಿ ದವಸ ಧಾನ್ಯ, ಮಾಸ್ಕ್ ವಿತರಣೆ ಮಾಡಿದ ಬಿಜೆಪಿ ಕಾರ್ಯಕರ್ತರ ಸೇವೆ ಜನರು ಯಾವತ್ತಿಗೂ ಮರೆಯಲಾರರು ಎಂದು ಬಿಜೆಪಿ ತಿಳಿಸಿದೆ. ಚುನಾವಣೆ ಹತ್ತಿರ ಬರುವಾಗ ಎಲ್ ಡಿ ಎಫ್ ಮತ್ತು ಯು ಡಿ ಎಫ್ ಕರ್ನಾಟಕ ರಾಜ್ಯ ದಲ್ಲಿ ಹಾಕಿರುವ ಮಣ್ಣು ನಾವೇ ತೆಗಿಸಿರುವುದಾಗಿ ಪತ್ರಿಕಾ ಹೇಳಿಕೆ, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿ ಪುಕ್ಸಟೆ ಪ್ರಚಾರ ಪಡೆಯಬಹುದೆಂದು ಅಂದಾಜಿಸಿದ್ದಲ್ಲಿ ಅದು ಭ್ರಮೆಯಾಗಿರುತ್ತದೆ ಎಂದು ಬಿಜೆಪಿ ಮಂಡಲ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.


