ಕಾಸರಗೋಡು: ಕರ್ನಾಟಕಕ್ಕೆ ದಿನನಿತ್ಯ ಸಂಚಾರ ನಡೆಸುವ ಮಂದಿಗಾಗಿ ತಲಪ್ಪಾಡಿಯಲ್ಲಿ ಆಂಟಿಜೆನ್ ತಪಾಸಣೆ ನಡೆಸಿ ಪಾಸ್ ಮಂಜೂರು ಮಾಡುವ ಪ್ರಕ್ರಿಯೆ ರಾಜ್ಯ ಸರ್ಕಾರ ವತಿಯಿಂದ ನಾಳೆ ಬುಧವಾರ (ಆ.19) ದಿಂದ ಆರಂಭಗೊಳ್ಳಲಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿರುವರು. ಕಾಸರಗೋಡು ಜಿಲ್ಲೆಯ ಇತರ ಗಡಿ ಪ್ರದೇಶಗಳಲ್ಲೂ ಈ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಸಚಿವ ಮಾಹಿತಿ ನೀಡಿರುವರು.
ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಿಂದ ಉದ್ಯೋಗಕ್ಕಾಗಿ ಕರ್ನಾಟಕಕ್ಕೆ ದಿನನಿತ್ಯ ಪ್ರಯಾಣಿಸುವ ಉದ್ಯೋಗಾರ್ಥಿಗಳಿಗಾಗಿ ಪಾಸು ಲಭ್ಯವಾಗಬೇಕಾದಲ್ಲಿ ಕೋವಿಡ್ ಪರೀಕ್ಷೆ ಮಾಡಿ ನೆಗೆಟಿವ್ ಸರ್ಟಿಫಿಕೇಟ್ ಸಲ್ಲಿಸಿದರೆ ಮಾತ್ರ ಪಾಸು ಮಂಜೂರಾಗುವುದು. ಅಲ್ಲದೆ ಬಿ.ಪಿ.ಎಲ್ ಕಾರ್ಡುದಾರಿಗೆ ಉಚಿತವೆಂದೂ ,ಎ.ಪಿ.ಎಲ್ ಕಾರ್ಡುದಾರರಿಗೆ ಪರೀಕ್ಷಾ ವೆಚ್ಚ ನೀಡಬೇಕೇಂಬ ಜಿಲ್ಲಾಡಳಿತ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಎರಡು ದಿನಗಳ ಹಿಂದೆ ಒಂದು ಆದೇಶ ಹೊರಡಿಸಿದ್ದರು. ಮಂಗಳೂರಿಗೆ ದಿನ ನಿತ್ಯ ಹೋಗಿ ಬರುವ ಸಾಮಾನ್ಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಚಿಕಿತ್ಸೆಗೆ ತೆರಳುವವರು ಈ ತೀರ್ಮಾನ ತೀವ್ರ ಸಂಕಷ್ಟಕ್ಕೊಳಪಡಿಸಿದೆ ಎಂದು, ಇದನ್ನು ಮರುಪರಿಶೀಲಿಸಿ ಉಚಿತ ಪರೀಕ್ಷೆಗಳಿಗೆ ಸರ್ಕಾರ ಮುಂದಾಗಬೇಕೆಂದು ಕಾಸರಗೋಡಿನ ಉಸ್ತುವಾರಿ ಸಚಿವ ಈ.ಚಂದ್ರಶೇಖರನ್ ಅವರಿಗೆ ವಿವಿಧ ರಾಜಕೀಯ ನೇತಾರರು, ಸಾಮಾಜಿಕ ಕಾರ್ಯಕರ್ತರು ನೇರವಾಗಿ ಮನವರಿಕೆ ಮಾಡಿದ್ದರು. ಜೊತೆಗೆ ಕಾಸರಗೋಡು ಲೋಕಸಭಾ ರಾಜಮೋಹನ್ ಉಣ್ಣಿತ್ತಾನ್.ಹಾಗೂ ಮಂಜೇಶ್ವರ ಶಾಸಕ ಎಂ .ಸಿ ಕಮರುದಿನ್ ಅವರಿಗೂ ಮನವಿ ಮಾಡಲಾಯಿತು. ಈ ಮನವಿಗೆ ಶೀಘ್ರವಾಗಿ ಸ್ಪಂದಿಸಿದ ಸಚಿವರು ಆ. 19 ರಂದು ಬೆಳಿಗ್ಗೆ ತಲಪಾಡಿ ಗಡಿಭಾಗದಲ್ಲೇ ಎಲ್ಲಾ ಉದ್ಯೋಗಾರ್ಥಿಗಳಿಗೆ ಪಾಸ್ ಅಗತ್ಯವಿದ್ದವರಿಗೆ ಕರೊನಾ ಅಂಟಿಜನ್ ಪರೀಕ್ಷೆ ಮಾಡಲಾಗುವ ಬಗ್ಗೆ ತುರ್ತು ಆದೇಶವನ್ನು ಸಚಿವ ಇ.ಚಂದ್ರಶೇಖರನ್ ಹೊರಡಿಸಿದ್ದಾರೆ. ಸಮಸ್ಯೆಯ ಬಗ್ಗೆ ತಕ್ಷಣ ಸಚಿವರ ಜೊತೆ ಚರ್ಚಿಸಲು, ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸಲು ರಾಜಕೀಯ ಅಡ್ಡಿಯಾಗಬಾರದು. ಪಕ್ಷ ಬೇಧ ಮರೆತು ಹೋರಾಟ ಮಾಡುವ ಅಗತ್ಯ ಇದೆ ಎಂದು ಸಹಕರಿಸಿದ ಕುಂಬಳೆಯ ರಾಜಕೀಯ, ಸಾಮಾಜಿಕ ಧುರೀಣ ಜಯಪ್ರಕಾಶ್ ನಾರಾಯಣಮಂಗಲ ಅವರಿಗೂ, ನ್ಯಾಯವಾದಿ ಉದಯ ಕುಮಾರ್ ಅವರಿಗೆ ಜನತೆ ಅಭಿನಂದನೆ ಸಲ್ಲಿಸಿದೆ.


