ಕಾಸರಗೋಡು: ಗಡಿ ಗ್ರಾಮ ಎಣ್ಮ ಕಜೆ ಪಂಚಾಯತಿಯ 12ನೇ ವಾರ್ಡ್ ಕಾವುತಮೂಲೆ ಎಸ್ಸಿ ಕಾಲನಿಯ ಸಮುದಾಯ ಭವನವೆಂಬ ದಶಕದ ಕನಸು ಕೊನೆಗೂ ನನಸಾಗಿದೆ.
ಸಮುದಾಯ ಭವನದ ಸಾಕಾರತೆಯೊಂದಿಗೆ ಕಾಲನಿ ನಿವಾಸಿಗಳ ತುರ್ತು ಬೇಡಿಕೆಯೊಂದು ಈಡೇರಿದ ಸಂಭ್ರಮ ಮನೆಮಾಡಿದೆ. ನೂತನ ಸಮುದಾಯ ಸಭಾಂಗಣವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಕೋವಿಡ್ ನಿಬಂಧನೆಗಳಿಗೆ ಅನುಸಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಸಭಾಂಗಣವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು 2018-19ರ ವಾರ್ಷಿಕ ಯೋಜನೆಯ ಭಾಗವಾಗಿ ನಿರ್ಮಿಸಲಾಗಿರುವ ಇಲ್ಲಿಯ ಸಮುದಾಯ ಭವನದ ನಿರ್ಮಾಣಕ್ಕೆ 10 ಲಕ್ಷ ರೂ. ವ್ಯಯಿಸಲಾಗಿದೆ. ಸಮುದಾಯ ಭವನವು ಕಾಲನಿ ನಿವಾಸಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ವೈ. ಶಾರದಾ ವಹಿಸಿದ್ದರು. ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಯನ್ನು ಒದಗಿಸಿದ ಮಾಂಕು ಕಾವುತಮೂಲೆ ಅವರನ್ನು ಬ್ಲಾಕ್ ಪಂಚಾಯತಿ ಅಧ್ಯಕ್ಷರು ಗೌರವಿಸಿದರು.
ಎಣ್ಮಕಜೆ ಗ್ರಾ.ಪಂ. ಉಪಾಧ್ಯಕ್ಷ ಸಿದ್ದೀಕ್ ಹಾಜಿ ಖಂಡಿಗೆ, ಕಾಸರಗೋಡು ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪುತ್ತಿಗೆ, ಶೇಣಿ ಶ್ರೀಶಾರದಾಂಬಾ ಶಾಲೆಯ ಮುಖ್ಯ ಶಿಕ್ಷಕ ರಾಧಾಕೃಷ್ಣ ಮಾಸ್ತರ್, ಎಸ್.ಸಿ ಪ್ರಮೋಟರ್ ಯು. ಶಶಿಧರ್, ಸಾಮಾಜಿಕ ಕಾರ್ಯಕರ್ತ ಎಂ.ಎಸ್. ಇಬ್ರಾಹಿಂ, ಸುಂದರ, ಎಸ್. ಸವಿತಾ ಮತ್ತು ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.


