ಮಂಜೇಶ್ವರ: ಉಪ್ಪಳ ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಚಟುವಟಿಕೆ ಸ.1 ರಿಂದ ಆರಂಭವಾಗಲಿದ್ದು, ಈ ಸಂಬಂಧ ಚಿಕಿತ್ಸಾ ಸೌಲಭ್ಯ ಅಗತ್ಯವಿರುವವರ ನೋಂದಣಿ ಸೋಮವಾರದಿಂದ ಆರಂಭವಾಗಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟಕ ಚಟುವಟಿಕೆ ನಡೆಸುತ್ತಿದೆ. ಮಂಗಲ್ಪಾಡಿಯಲ್ಲಿರುವ ಈ ಆಸ್ಪತ್ರೆ ವ್ಯಾಪ್ತಿಯ ಮಂಗಲ್ಪಾಡಿ,ಮಂಜೇಶ್ವರ, ಮೀಂಜ, ವರ್ಕಾಡಿ, ಪುತ್ತಿಗೆ, ಪೈವಳಿಕೆ, ಕುಂಬಳೆ, ಎಣ್ಮಕಜೆ ಗ್ರಾಮ ಪಂಚಾಯತಿಗಳ ಮೂತ್ರ ಜನಕಾಂಗ ಸಂಬಂಧ ರೋಗಿಗಳು ಈ ಸೌಲಭ್ಯ ವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ತಿಳಿಸಿರುವರು.
ಮೊದಲ ಹಂತದಲ್ಲಿ ಅರ್ಹರಾದ 90 ಮಂದಿಗೆ ವಿವಿಧ ಪಾಳಿ(ಶಿಫ್ಟ್)ಗಳಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಲಾಗುವುದು. ಆ.26 ವರೆಗೆ ಅಗತ್ಯವಿರುವ ಮಂದಿ ದೂರವಾಣಿ ಸಂಖ್ಯೆ: 9895216298, 9447657840 ಗಳ ಮೂಲಕ ಕರೆ ಮಾಡಿ(ಬೆಳಗ್ಗೆ 9 ರಿಂದ ಸಂಜೆ 5 ಗಂಟೆಗೆ ವರೆಗೆ)ನೋಂದಣಿ ನಡೆಸಬಹುದು. ಈ ವೇಳೆ ರೋಗಿಯ ಹೆಸರು,ವಿಳಾಸ, ವಯಸ್ಸು, ಆಧಾರ್ ಕಾರ್ಡ್ ನಂಬ್ರ, ಪಂಚಾಯತ್, ಈಗಾಗಲೇ ನಡೆಸಿರುವ ಡಯಾಲಿಸಿಸ್ ಚಿಕಿತ್ಸೆಯ ಮಾಹಿತಿಗಳು, ಎ.ಪಿ.ಎಲ್/ಬಿ.ಪಿ.ಎಲ್., ಕೌಟುಂಬಿಕ ವಾರ್ಷಿಕ ಆದಾಯ, ಸದ್ರಿ ಯಾವುದಾದರೂ ಆರ್ಥಿಕ ಸಹಾಯ ಲಭಿಸುವುದಿದ್ದರೆ ಅಂಥಾ ವಿಷಯಗಳನ್ನು ಈ ವೇಳೆ ತಿಳಿಸಬೇಕು.
ಮಾಜಿ ಶಾಸಕ, ದಿ.ಪಿ.ಬಿ.ಅಬ್ದುಲ್ ರಝಾಕ್ ಅವರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಮಂಜೂರು ಮಾಡಲಾದ 50 ಲಕ್ಷ ರೂ. ನಿಂದ ಡಯಾಲಿಸಿಸ್ ವಿಭಾಗದ ಕಟ್ಟಡ, ವಿದ್ಯುತ್, ಜಲ ಸಂಪನ್ಮೂಲ ಸಹಿತ ಸೌಲಭ್ಯಗಳನ್ನು ಬ್ಲಾಕ್ ಪಂಚಾಯತಿ ಸಿದ್ಧಗೊಳಿಸಿದೆ. ಜೊತೆಗೆ ಡಯಾಲಿಸಿಸ್ ಗೆ ಅಗತ್ಯವಿರುವ ಆರ್.ಒ. ಪ್ಲಾಂಟ್ ಗೆ ಶಾಸಕ ಎಂ.ಸಿ.ಕಮರುದ್ದೀನ್ ಅವರ ನಿಧಿಯಿಂದ ಮೊಬಲಗು ಮೀಸಲಿರಿಸಲಾಗಿದೆ.


