ಕಾಸರಗೋಡು: ಜಿಲ್ಲೆಯಲ್ಲಿ ಅಂತಾರಾಜ್ಯ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ಕಲ್ಪಿಸುತ್ತಿದ್ದಂತೆ ಗಡಿ ಪ್ರದೇಶಗಳಲ್ಲಿ ಆ್ಯಂಟಿಜೆನ್ ತಪಾಸಣೆ ನಡೆಸಲು ಆಯಾ ಪಂಚಾಯಿತಿಗಳು ಕ್ರಮ ಆರಂಭಿಸಿದೆ. ದ.ಕ ಜಿಲ್ಲೆಯಿಂದ ಆಗಮಿಸುವವರು ಕಡ್ಡಾಯವಾಗಿ ಆ್ಯಂಟಿಜೆನ್ ತಪಾಸಣೆ ನಡೆಸಿ, ನೆಗೆಟಿವ್ ಸರ್ಟಿಫಿಕೇಟ್ ಹಾಜರುಪಡಿಸುವಂತೆ ಹಾಗೂ ಕೋವಿಡ್-19 ಜಾಗ್ರತಾ ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳುವಂತೆಯೂ ಸೂಚಿಸಿರುವ ಹಿನ್ನೆಲೆಯಲ್ಲಿ ಈ ಕ್ರಮ ಆರಂಭಿಸಲಾಗಿದೆ. ಪಾಣತ್ತೂರು, ಮಾಣಿಮೂಲೆ, ಪೆರ್ಲ(ಸಾರಡ್ಕ) ಹಾಗೂ ಜಾಲ್ಸೂರ್ ಹಾದಿಯ ಮೂಲಕ ದ.ಕ ಜಿಲ್ಲೆಗೆ ಸಂಚಾರಕ್ಕೆ ಅನುಮತಿ ಕಲ್ಪಿಸಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್ಬಾಬು ಆದೇಶ ಹೊರಡಿಸಿದ್ದರು.
ಮುಂದುವರಿದ ಗೊಂದಲ:
ಅಂತಾರಾಜ್ಯ ಸಂಪರ್ಕದ ಗಡಿಗಳನ್ನು ಕಳೆದ ಹಲವು ತಿಂಗಳಿಂದ ಮುಚ್ಚಿರುವುದರಿಂದ ಜನತೆ ಹೆಚ್ಚಿನ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಬಿಜೆಪಿ ಜಿಲ್ಲಾ ಸಮಿತಿ ಸಲ್ಲಿಸಿದ ಮನವಿಯನ್ವಯ ಕೇರಳ ಹೈಕೋರ್ಟು ಗಡಿತೆರವಿಗೆ ಆದೇಶಿಸಿದ್ದರೂ, ಜಿಲ್ಲಾಡಳಿತ ಮಾತ್ರ ಗೋಡೆಮೇಲೆ ಅಡ್ಡದೀಪವಿರಿಸಿದಂತೆ ವರ್ತಿಸುತ್ತಿದೆ. ರೆಗ್ಯುಲರ್ ಪಾಸ್ ಕೈಬಿಟ್ಟರೂ, ಆ್ಯಂಟಿಜೆನ್ ತಪಾಸಣೆ ನಡೆಸುವುದರ ಜತೆಗೆ ಕೋವಿಡ್-19 ಜಾಗ್ರತಾ ಪೋರ್ಟಲ್ ಮೂಲಕ ನೋಂದಾಯಿಸುವಂತೆ ಸೂಚಿಸುವ ಮೂಲಕ ಜನತೆಯ ಸಂಕಷ್ಟ ಯಥಾಪ್ರಕಾರ ಮುಂದುವರಿಯುವಂತೆ ಮಾಡಿದೆ. ಸಾರಡ್ಕ ಚೆಕ್ಪೋಸ್ಟ್ ತೆರವುಗೊಂಡು ವಾಹನಗಳು ಕೇರಳ ಗಡಿದಾಟಿ ಆಗಮಿಸುತ್ತಿದ್ದರೂ, ಅಡ್ಕಸ್ಥಳದಲ್ಲಿ ಕೇರಳ ಪೊಲೀಸರ ಬಿಗು ತಪಾಸಣೆ ಮುಂದುವರಿದಿದೆ. ಇನ್ನು ಆ್ಯಂಟಿಜೆನ್ ತಪಾಸಣೆಗಾಗಿ ವೈದ್ಯಕೀಯ ತಂಡದೊಂದಿಗೆ ಆರೋಗ್ಯ ಇಲಾಖೆಯೂ ಕಾರ್ಯಾಚರಿಸಲು ಮುಂದಾಗಿದೆ. ಒಬ್ಬ ವೈದ್ಯ ಹಾಗೂ ಲ್ಯಾಬ್ ಟೆಕ್ನಿಶಿಯನ್ ಒಳಗೊಂಡ ಸಿಬ್ಬಂದಿ ಅಗತ್ಯವಿದ್ದು, ಇಲ್ಲಿಗೆ ಸಿಬ್ಬಂದಿ ಪೂರೈಕೆಗೆ ಆರೋಗ್ಯ ಇಲಾಖೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಪಂಚಾಯಿತಿ ಸಭೆ:
ಸಾರಡ್ಕ ಚೆಕ್ಪೋಸ್ಟ್ ಮೂಲಕ ದ.ಕ ಜಿಲ್ಲೆ ಪ್ರವೇಶಿಸುವ ಅಡ್ಕಸ್ಥಳದಲ್ಲಿ ತಾತ್ಕಾಲಿಕ ಲ್ಯಾಬ್ ಒಳಗೊಂಡ ವೈದ್ಯಕೀಯ ಹಾಗೂ ಜಾಗ್ರತಾಪೋರ್ಟಲ್ನಲ್ಲಿ ನೋಂದಾವಣೆ ನಡೆಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಿಬ್ಬಂದಿಯನ್ನು ನೇಮಿಸುವ ನಿಟ್ಟಿನಲ್ಲಿ ಎಣ್ಮಕಜೆ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಸಭೆ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ವೈ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಸಿ.ಐ, ವೈದ್ಯಾಧಿಕಾರಿ, ಆರೋಗ್ಯ, ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಅಭಿಮತ:
ಆ್ಯಂಟಿಜೆನ್ ತಪಾಸಣೆ ನಡೆಸಲು ವೈದ್ಯ, ಲ್ಯಾಬ್ ಟೆಕ್ನಿಶಿಯನ್ ಅಗತ್ಯವಿದ್ದು, ಇವರಿಗೆ ವೇತನ ನೀಡಲು ಪಂಚಾಯಿತಿ ಫಂಡಿನಲ್ಲಿ ಹಣದ ಕೊರತೆಯಿದೆ.ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಆರೋಗ್ಯ ಇಲಾಖೆಯಲ್ಲೂ ಸಿಬ್ಬಂದಿ ಕೊರತೆಯಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು, ತಕ್ಷಣ ಲ್ಯಾಬ್ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು.
-ಶಾರದಾ ವೈ, ಅಧ್ಯಕ್ಷೆ
ಎಣ್ಮಕಜೆ ಗ್ರಾಮ ಪಂಚಾಯಿತಿ
ಚಿತ್ರ ಮಾಹಿತಿ: 1)ಸಾರಡ್ಕ ಚೆಕ್ಪೋಸ್ಟ್ ಮೂಲಕ ಕಾಸರಗೋಡು ಜಿಲ್ಲೆ ಪ್ರವೇಶಿಸುತ್ತಿರುವ ವಾಹನ.
2): ಅಡ್ಕಸ್ಥಳದಲ್ಲಿ ರಸ್ತೆತಡೆ ನಿರ್ಮಿಸಿ ಕೇರಳ ಪೊಲೀಸರಿಂದ ಬಿಗು ಕಾರ್ಯಾಚರಣೆ.


