ಬದಿಯಡ್ಕ: ಕವನಗಳು ಜೀವನದ ಕೆಲವು ಘಟನೆಗಳಿಂದ ಸುಂದರವಾಗಿ ಮೂಡಿಬರುವುವು. ಘಟನೆಗಳೇ ಬರಹಕ್ಕೆ ಸ್ಫೂರ್ತಿ ಎಂದು ಕವಿ ರಂಗ ಶರ್ಮಾ ಉಪ್ಪಂಗಳ ಹೇಳಿದರು.
ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕ ಸಮಾಜ ಮಂದಿರದಲ್ಲಿ ಮಂಗಳವಾರ ಜರಗಿದ ಚುಟುಕುಗಳು ಮತ್ತು ಕವನಗಳು ಕುರಿತಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಚುಟುಕು ಎಂದರೆ ಗುಟುಕಿನಂತೆ. ಅದರ ರಚನೆಯಲ್ಲಿ ಸರಿಯಾದ ಪದಪ್ರಯೋಗ ಮತ್ತು ಪ್ರಾಸ ಮುಖ್ಯ. ಕೊನೆಗೆ ಪಂಚ್ ಇರಬೇಕು. ಹಾಸ್ಯರೂಪದಲ್ಲಿ ಹೇಳಿದರೆ ಹೆಚ್ಚು ತಟ್ಟುತ್ತದೆ. ನಕಾರಾತ್ಮಕತೆ ಹೆಚ್ಚು ಇರಬಾರದು ಎಂದು ಹೇಳಿದರು. ತಮ್ಮ ಹಲವಾರು ಹಾಸ್ಯಚುಟುಕುಗಳನ್ನು ವಾಚಿಸಿ ಸಭಿಕರ ಮನಗೆದ್ದರು. ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಮಾತನಾಡಿ ಮುಕ್ತಕಗಳ ಪರಿಚಯ ಮಾಡಿಕೊಟ್ಟರು. ತಮ್ಮ ಕೆಲವು ಮುಕ್ತಕ ಮತ್ತು ಚುಟುಕಗಳನ್ನು ವಾಚಿಸಿದರು. ಉಪಾಧ್ಯಕ್ಷ ವೈ.ಕೆ.ಗಣಪತಿ ಭಟ್ ಸ್ವಾಗತಿಸಿ, ಕೆ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಾರ್ಯದರ್ಶಿ ಡಾ.ವೇಣುಗೋಪಾಲ್ ಕಳೆಯತ್ತೋಡಿ ಅತಿಥಿಗಳ ಪರಿಚಯ ಮಾಡಿ ಕಾರ್ಯಕ್ರಮ ನಿರೂಪಿಸಿದರು.