ಕಾಸರಗೋಡು: ಕೋವಿಡ್ ಸೋಂಕು ಹರಡುತ್ತಿದ್ದ ಹಿನ್ನೆಲೆಯಲ್ಲಿ ಮುಚ್ಚುಗಡೆಗೊಂಡಿರುವ ಶಿಕ್ಷಣಾಲಯಗಳನ್ನು ಭಾಗಶಃ ತೆರೆಯಲಾಗುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ರೋಗ ಹರಡುವಿಕೆ ಕೊಂಚ ಕಡಿಮೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಶಾಲೆಗಳ ಆರಂಭಕ್ಕೆ ತೀರ್ಮಾನ ಕೈ ಗೊಂಡಿದೆ. ಸುದೀರ್ಘ ವಿರಾಮದ ನಂತರ ಶಾಲೆಗಳಿಗೆ ಹಾಜರಾಗುತ್ತಿರುವ ಮಕ್ಕಳು, ಶಿಕ್ಷಕರು, ಹೆತ್ತವರು ಅತೀವ ಜಾಗರೂಕತೆ ಪಾಲಿಸಬೇಕು. ತರಗತಿಗಳ ಪ್ರವೇಶಾತಿ ವೇಳೆಯೂ, ಕುಳಿತುಕೊಳ್ಳುವ ವಿಧಾನದಲ್ಲೂ ಕಟ್ಟುನಿಟ್ಟು ಪಾಲಿಸುವಲ್ಲಿ ಶಿಕ್ಷಕರು ಕಾಳಜಿ ವಹಿಸಬೇಕು. ಮಾಸ್ಕ್ ಧಾರಣೆ, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಕೈಗಳನ್ನು ಆಗಾಗ ತೊಳೆಯುವುದು ಇತ್ಯಾದಿ ಕ್ರಮಗಳಲ್ಲಿ ಅಸಡ್ಡೆ ಸಲ್ಲದು. ಆಹಾರ, ನೀರು ಸೇವನೆ ಹೊರತುಪಡಿಸಿ ಬೇರಾವ ಹೊತ್ತಿನಲ್ಲೂ ಮಾಸ್ಕ್ ತೆರವು, ಸಡಿಲಗೊಳಿಸುವುದು ಸಲ್ಲದು.
ಸುದೀರ್ಘ ಅವಧಿಯ ನಂತರ ಶಾಲೆಯಲ್ಲಿ ಗೆಳೆಯರನ್ನು ಕಾಣುವ ಸಂದರ್ಭವಿರುವ ಹಿನ್ನೆಲೆಯಲ್ಲಿ ಮಕ್ಕಳು ಗುಂಪುಸೇರುವ ಸಾಧ್ಯತೆಯಿದ್ದು, ಅದನ್ನು ನಿಯಂತ್ರಿಸಬೇಕು. ಹಸ್ತಲಾಘವ, ಆಲಿಂಗನ ಇತ್ಯಾದಿ ನಡೆಸದಂತೆ ಮಕ್ಕಳನ್ನು ನಿಯಂತ್ರಿಸಬೇಕು. ಪೆನ್, ಪುಸ್ತಕ ಸಹಿತ ಕಲಿಕೋಪಕರಣ ಗಳನ್ನು ಪರಸ್ಪರ ಹಸ್ತಾಂತರಿಸುವುದು, ಬಳಸುವುದು ಇತ್ಯಾದಿ ನಡೆಸಕೂಡದು. ಆಹಾರ ಸೇವನೆ ವೇಳೆ ಸಾಧಾರಣ ಗತಿಯಲ್ಲಿ ಮಕ್ಕಳು ಜತೆಗೂಡುತ್ತಾರೆ. ಆದರೆ ಈ ಕೋವಿಡ್ ಅವಧಿಯಲ್ಲಿ ಆಹಾರ ಹಂಚುವುದು ಇತ್ಯಾದಿಗಳನ್ನು ನಡೆಸಕೂಡದು.
ವಯೋವೃದ್ಧರು, ಗರ್ಭಿಣಿಯರು, ಹಾಸುಗೆ ಹಿಡಿದ ರೋಗಿಗಳು, ಗಂಭೀರ ಸ್ವರೂಪದ ರೋಗಿಗಳು ಇರುವ ಮನೆಗಳಿಗೆ ಮಕ್ಕಳನ್ನು ಒಯ್ಯಲೇಬಾರದು.
ಯಾವುದೇ ರೀತಿಯ ರೋಗ ಲಕ್ಷಣ ಕಂಡುಬರುವ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಕೂಡದು. ಈ ಬಗ್ಗೆ ಹೆತ್ತವರು, ಶಿಕ್ಷಕರು ಜಾಗ್ರತೆ ವಹಿಸಬೇಕು. ಜ್ವರ, ಶೀತ, ಗಂಟಲುನೋವು, ಇತ್ಯಾದಿ ಇರುವ ಮಕ್ಕಳೂ ಶಾಲೆಗೆ ತೆರಳಕೂಡದು. ಅವರು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು.
ಕಳೆದ ಒಂದು ವರ್ಷದಿಂದ ಕೋವಿಡ್ ವಿರುದ್ಧ ಪ್ರತಿರೋಧದ ಸತತ ಹೋರಾಟದಲ್ಲಿ ನಮ್ಮ ನಾಡು ಜಗತ್ತಿಗೆ ಮಾದರಿಯಾಗಿದೆ. ಶಾಲೆ ಪುನರಾರಂಭ ವೇಳೆ ಸೋಂಕು ಹೆಚ್ಚಳಗೊಳ್ಳದಂತೆ ಶೈಕ್ಷಣಿಕ ವರ್ಷ ಪೂರ್ಣಗೊಳ್ಳಬೇಕು. ಆರೋಗ್ಯ ಪೂರ್ಣ ಮನಸ್ಸು ಮತ್ತು ಶರೀರ ಪರೀಕ್ಷೆಗೆ ಹಾಜರಾಗಲು ಪೂರಕವಾಗಿರುವಂತೆ ಎಲ್ಲ ಸಹಕರಿಸಬೇಕು. ಆರೋಗ್ಯ ಇಲಾಖೆ ತಿಳಿಸುವ ಜಾಗ್ರತಾ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದವರು ತಿಳಿಸಿರುವರು.