ಕುಂಬಳೆ: ಇತಿಹಾಸ ಪ್ರಸಿದ್ದ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಉತ್ಸವಕ್ಕೆ ಜ.14 ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗುವುದು. ಆದರೆ ಈ ವರ್ಷದ ದೇವಾಲಯ ಉತ್ಸವವು ಸರ್ಕಾರದ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ದೇವಾಲಯ ಸಮಿತಿ ಅಧಿüಕಾರಿಗಳು ಕುಂಬಳೆ ಪ್ರೆಸ್ ಪೋರಂನಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಭಕ್ತರಿಗೆ ದೇವಾಲಯ ಪ್ರವೇಶ ನೀಡಲಾಗುತ್ತದೆ. ಭೋಜನ ವ್ಯವಸ್ಥೆಗಳು ಇರುವುದಿಲ್ಲ. 10 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತುಲಾಭಾರ ಸೇವೆಗೆ ಅವಕಾಶ ಇರುವುದಿಲ್ಲ.ಅಲ್ಲದೆ ತುಲಾಭಾರ ಸೇವೆಯ ಸಂದರ್ಭ ಕಟ್ಟುನಿಟ್ಟಿನ ಕೋವಿಡ್ ಮಾನದಂಡಗಳಿರುವುದು. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಯಾವ ಕಾರಣಕ್ಕೂ ಅನುಮತಿಸಲಾಗುವುದಿಲ್ಲ. ಉತ್ಸವಗಳು ಪ್ರತಿದಿನ ರಾತ್ರಿ 10 ಗಂಟೆಗೆ ಕೊನೆಗೊಳ್ಳುತ್ತವೆ ಎಂದು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅರ್ಪಣೆಗಳನ್ನು ಮಾಡಲು ಬಯಸುವ ಭಕ್ತರು ದೇವಾಲಯದ ಬ್ಯಾಂಕ್ ಖಾತೆಯ ಮೂಲಕ ಪಾವತಿ ಮಾಡಬಹುದು ಮತ್ತು ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕಣಿಪುರ ಶ್ರೀಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಕೃಷ್ಣವರ್ಮ ರಾಜ ಟಿ.ಎಸ್., ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಬಿ.ರಘುನಾಥ ಪೈ, ಬೆಡಿ ಉತ್ಸವ ಸಮಿತಿ ಅಧ್ಯಕ್ಷ ಸದಾನಂದ ಕಾಮತ್ ಕೆ., ಕುಂಬಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಕ್ಷೇತ್ರದ ಪ್ರಬಂಧಕ ರಾಜಶೇಖರ ವಿ.ಸಿ., ಪುನರ್ ನಿರ್ಮಾಣ ಸಮಿತಿ ಕಾರ್ಯದರ್ಶಿ ಆರ್.ಜಯಕುಮಾರ್, ಜೊತೆಕಾರ್ಯದರ್ಶಿ ವಿವೇಕಾನಂದ ಭಕ್ತ, ಗ್ರಾ.ಪಂ.ಮಾಜಿ ಸದಸ್ಯ ಸುಧಾಕರ ಕಾಮತ್ ಉಪಸ್ಥಿತರಿದ್ದರು.