ನವದೆಹಲಿ: ವೃದ್ಧ ತಂದೆ-ತಾಯಿಗಳನ್ನು ಮಕ್ಕಳು ಬೀದಿಪಾಲು ಮಾಡುವ ಅಥವಾ ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ದೇಶದಲ್ಲಿ ಹೆಚ್ಚುತ್ತಿದೆ. ಇದರಿಂದ ಆಹಾರಕ್ಕೆ ತೊಂದರೆ ಅನುಭವಿಸುತ್ತಿರುವ ವಯೋವೃದ್ಧರಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ವೃದ್ಧರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸ್ಟಾರ್ಟಪ್, ವೃದ್ಧರಿಗೆ ಸಹಾಯ ನೀಡಲು ಸಾಧ್ಯವಾಗುವಂತೆ ಸ್ವಸಹಾಯ ಗುಂಪುಗಳ (ಎಸ್ಎಚ್ಜಿ) ಮೂಲಕ ಇದನ್ನು ಜಾರಿ ಮಾಡಲು ಚಿಂತಿಸಿದೆ. ಇದಕ್ಕಾಗಿ ಎಸ್ಎಚ್ಜಿ ಸದಸ್ಯ ಕೌಶಲವನ್ನು ಸುಧಾರಿಸಲೂ ಸರ್ಕಾರ ಆಲೋಚಿಸಿದೆ. ವೃದ್ಧಾಶ್ರಮ ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆಯ ಅನುಷ್ಠಾನವಾಗಲಿದೆ.
ಹಿರಿಯ ನಾಗರಿಕರ ಕಲ್ಯಾಣ ನಿಧಿಯ (ಎಸ್ಸಿಡಬ್ಲ್ಯುಎಫ್) ಅಂತರ್ ಸಚಿವಾಲಯ ಸಮಿತಿ ಫೆಬ್ರವರಿ 4ರಂದು ಈ ಯೋಜನೆಗೆ ಅನುಮೋದನೆ ನೀಡಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಕಾರ್ಯದರ್ಶಿ ಆರ್. ಸುಬ್ರಮಣ್ಯಂ ಸಮಿತಿಯ ಅಧ್ಯಕ್ಷರಾಗಿದ್ದಾರೆ. 2050ರ ವೇಳೆಗೆ ದೇಶದ ವೃದ್ಧರ ಸಂಖ್ಯೆ 30 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಈಗಿರುವ ಕಲ್ಯಾಣ ಕಾರ್ಯಕ್ರಮಗಳ ಗುರಿಯನ್ನು ಐದು ವರ್ಷಗಳ ಅವಧಿಗೆ ನಿಗದಿಪಡಿಸಲು ಹಾಗೂ 'ವೃದ್ಧರ ಪೋಷಣ್ ಅಭಿಯಾನ್' ಸಹಿತ ಹೊಸ ಯೋಜನೆಗಳನ್ನು ರೂಪಿಸಲು ಸರ್ಕಾರ ಬಯಸಿದೆ.
ಅನಾಥರಿಗೆ ಆದ್ಯತೆ: ಅನಾಥರು ಮತ್ತು ಅಪೌಷ್ಟಿಕತೆಯಿಂದ ಬಳಲುವ ಹಾಗೂ ಯಾವುದೇ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯದ ವೃದ್ಧರನ್ನು ಗುರುತಿಸಿ ಅವರಿಗೆ ಪ್ರತಿದಿನ ಮಧ್ಯಾಹ್ನ ಬಿಸಿಯಾದ ಊಟ ವನ್ನು ಒದಗಿಸುವುದು ಯೋಜನೆಯ ಪ್ರಮುಖ ಅಂಶವಾಗಿದೆ.
ಹಂತ ಹಂತವಾಗಿ ಜಾರಿ: ಆರಂಭದಲ್ಲಿ ಪ್ರತಿ ದಿನ ಕನಿಷ್ಠ 55,000 ಅನಾಥ ವೃದ್ಧರಿಗೆ ಬಿಸಿಯೂಟ ಒದಗಿಸಲಾಗುತ್ತದೆ. ನಿತ್ಯ 25 ಜನರಿಗೆ ಆಹಾರ ಪೂರೈಸಲು ಸಮರ್ಥವಾದ ಕೇಂದ್ರಗಳ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಪ್ರತಿ ವರ್ಷ ಈ ಸಂಖ್ಯೆಯನ್ನು ಕ್ರಮೇಣವಾಗಿ ಹೆಚ್ಚಿಸಿ 2024-25ರ ವೇಳೆಗೆ 2,75,000 ವೃದ್ಧರಿಗೆ ಊಟ ಕಲ್ಪಿಸಲಾಗುತ್ತದೆ. ಆರಂಭದಲ್ಲಿ 2000 ಪಂಚಾಯಿತಿಗಳು ಮತ್ತು 200 ಪುರಸಭೆ/ನಗರಸಭೆಗಳ ವ್ಯಾಪ್ತಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುತ್ತದೆ. ನಂತರ 10,000 ಪಂಚಾಯತಿ ಹಾಗೂ 1,000 ಪುರ/ನಗರಸಭೆಗಳ ಮೂಲಕ ಈ ಕಾರ್ಯವನ್ನು ಸಾಕಾರಗೊಳಿಸಲಾಗುತ್ತದೆ.