ನವದೆಹಲಿ: ಕೊರೋನಾವನ್ನು ಹಿಮ್ಮೆಟ್ಟಿಸುವುದಕ್ಕೆ ಯತ್ನಿಸುತ್ತಿರುವ ಭಾರತಕ್ಕೆ ಮಹಾರಾಷ್ಟ್ರದ ರೂಪಾಂತರಿ ಕೊರೋನಾ ಹೊಸ ಸವಾಲಾಗಿ ಪರಿಣಮಿಸಿದೆ.
ಮಹಾರಾಷ್ಟ್ರದ ಕೋವಿಡ್-19 ಸೋಂಕು ಪರಿಸ್ಥಿತಿಯನ್ನು ಅವಲೋಕಿಸಿ ನಿಯಂತ್ರಣಕ್ಕೆ ತರಲು ಸಹಕಾರಿಯಾಗುವ ನಿಟ್ಟಿನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿದೆ. ಈ ನಡುವೆ ಕೇಂದ್ರ ತಂಡದ ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೋನಾ ವೈರಾಣು ಕಡಿಮೆ ಮಾರಕವಾಗಿದ್ದರೂ ವೇಗವಾಗಿ ಹರಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಕೊರೋನಾ ಪ್ರಾರಂಭವಾದಾಗಿನಿಂದಲೂ ಮಹಾರಾಷ್ಟ್ರ ಕೋವಿಡ್-19 ವೈರಾಣುವಿನ ಹಾಟ್ ಸ್ಪಾಟ್ (ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶ) ಆಗಿದ್ದು, ಕಳೆದ ಕೆಲವು ವಾರಗಳಿಂದ ಸೋಂಕು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಶುಕ್ರವಾರದಂದು (ಮಾ.05) ರಂದು ಮಹಾರಾಷ್ಟ್ರದಲ್ಲಿ 10,216 ಹೊಸ ಪ್ರಕರಣಗಳು ವರದಿಯಾಗಿದ್ದು ಅಕ್ಟೋಬರ್ 16 ರ ನಂತರದಲ್ಲಿ ಅತಿ ಹೆಚ್ಚು ವರದಿಯಾದ ಪ್ರಕರಣಗಳ ಸಂಖ್ಯೆ ಇದಾಗಿದೆ. ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 88,838 ದಾಟಿದೆ.
ಮೂವರು ಸದಸ್ಯರ ತಂಡ ಕೇಂದ್ರಕ್ಕೆ ತಲುಪಿಸಿರುವ ತನ್ನ ವರದಿಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಗಳಿಗೆ ಬೇರೆ ಕಾರಣ ತಿಳಿದಿಲ್ಲ ಎಂದು ಹೇಳಿದೆ.
ಸೂಕ್ತ ಮುನ್ನೆಚರಿಕೆ ಕೈಗೊಳ್ಳದೇ ಇರೋದು, ಗ್ರಾಮ ಪಂಚಾಯ್ತಿ ಚುನಾವಣೆ, ಮದುವೆ ಕಾರ್ಯಕ್ರಮಗಳು, ಶಾಲೆ ಪುನಾರಂಭ, ಸರ್ಕಾರಿ ಸಾರಿಗೆಗಳಲ್ಲಿ ಹೆಚ್ಚಿದ ಜನದಟ್ಟಣೆ, ಕೋವಿಡ್-19 ಹೆಚ್ಚಳಕ್ಕೆ ಇರುವ ಇನ್ನಿತರ ಕಾರಣಗಳಾಗಿವೆ.
ಮಹಾರಾಷ್ಟ್ರದಲ್ಲಿ ಈವರೆಗೂ ಹರಡದೇ ಇದ್ದ ಪ್ರದೇಶಗಳಲ್ಲಿ ಈಗ ಹೆಚ್ಚು ಹರಡುತ್ತಿದ್ದು, ಈ ಪೈಕಿ ಹೆಚ್ಚು ಪ್ರಕರಣಳು ರೋಗ ಲಕ್ಷಣ ರಹಿತವಾಗಿದೆ. ಜನತೆ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ ಅಥವಾ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಆದರೆ ಕೊರೋನಾ ಹೊಸ ರೂಪಾಂತರಿ ವೈರಾಣು ಕಡಿಮೆ ಮಾರಕವಾಗಿದೆ ಎಂದು 6 ಪುಟಗಳ ವರದಿಯಲ್ಲಿ ತಿಳಿಸಿದೆ.