ತಿರುವನಂತಪುರಂ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾಜ್ಯ ಮೂಲಭೂತಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಅಧಿಕಾರಿಗಳಿಗೆ ಬೆದರಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತಮ್ಮ ಸರಕಾರ ನಿರ್ದೇಶನಾಲಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಕೇಂದ್ರದ ರಾಜಕೀಯ ಬಾಸ್ಗಳ ಆಗ್ರಹದಂತೆ ರಾಜ್ಯ ಅಧಿಕಾರಿಗಳಿಗೆ ಹೇಳಿಕೆ ನೀಡಲು ಜಾರಿ ನಿರ್ದೇಶನಾಲಯ ಒತ್ತಡ ಹೇರುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.
ವಿದೇಶ ವಿನಿಮಯ ನಿರ್ವಹಣಾ ಕಾಯಿದೆಯ ನಿಬಂಧನೆಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪಿಣರಾಯಿ ವಿಜಯನ್ ಅವರು ಅಧ್ಯಕ್ಷರಾಗಿರುವ ಮಂಡಳಿಯ ಹಿರಿಯ ಅಧಿಕಾರಿಗಳಿಗೆ ಜಾರಿ ನಿರ್ದೇಶನಾಲಯ ಮಂಗಳವಾರ ಸಮನ್ಸ್ ನೀಡಿತ್ತು. ಮಂಡಳಿಯ ಸಿಇಒ ಕೆ ಎಂ ಅಬ್ರಹಾಂ ಹಾಗೂ ಉಪ ಆಡಳಿತ ನಿರ್ದೇಶಕ ವಿಕ್ರಮಜಿತ್ ಸಿಂಗ್ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದ್ದರೂ ಅವರು ಈಡಿ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ.
"ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿ ಮಂಡಳಿಯನ್ನು ನಾಶಗೈಯ್ಯಲು ಯತ್ನಿಸುತ್ತಿದ್ದಾರೆ,'' ಎಂದು ವಿಜಯನ್ ಆರೋಪಿಸಿದ್ದಾರೆ.