ನವದೆಹಲಿ: ಕೊರೊನಾ ಲಸಿಕೆಗಳಿಗಾಗಿ 35 ಸಾವಿರ ಕೋಟಿ ರೂಪಾಯಿಯನ್ನು ವ್ಯರ್ಥ ಮಾಡಬೇಡಿ. ಅದೇ ಹಣವನ್ನು ದೇಶದ ಆರೋಗ್ಯ ಮೂಲ ಸೌಕರ್ಯಗಳನ್ನು ಸುಧಾರಿಸಲು ವಿನಿಯೋಗಿಸಿ ಎಂದು ಲೋಕಸಭಾ ಸಂಸದರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ಆರೋಗ್ಯ ಸಚಿವಾಲಯದ ಅನುದಾನದ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ವೈಎಸ್ಆರ್ಸಿಪಿ ಸದಸ್ಯ ಸಂಜೀವ್ ಕುಮಾರ್ ಸಿಂಗಾರಿ, ಸಾರ್ವತ್ರಿಕ ಲಸಿಕಾ ಅಭಿಯಾನ ಅಸಾಧ್ಯ ಎನಿಸಿದ್ದು, ಇದು ಹಣ ವ್ಯರ್ಥವಾಗುವ ದಾರಿಯಾಗಬಹುದು ಎಂದು ಹೇಳಿದ್ದಾರೆ.
"ಸರ್ಕಾರ ಪ್ರಸ್ತುತ ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂಪಾಯಿಯನ್ನು ಖರ್ಚು ಮಾಡುವ ಕುರಿತು ಪ್ರಸ್ತಾಪಿಸಿದೆ.ಇದಕ್ಕಾಗಿ ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಇದು ನನ್ನ ದೃಷ್ಟಿಯಲ್ಲಿ ಹಣ ವ್ಯರ್ಥ ಮಾಡುವ ಕೆಲಸವಷ್ಟೆ. ಈ ಕೊರೊನಾ ಲಸಿಕೆ 6-9 ತಿಂಗಳವರೆಗೆ ಸೋಂಕಿನಿಂದ ನಮ್ಮನ್ನು ಉಳಿಸಬಲ್ಲದು. ಆನಂತರ ಇಷ್ಟು ಕೋಟಿ ರೂಪಾಯಿ ಇಲ್ಲವಾಗುತ್ತದೆ ಅಲ್ಲವೇ" ಎಂದು ಪ್ರಶ್ನಿಸಿದ್ದಾರೆ.
ಕೊರೊನಾದಂಥ ಸಂದರ್ಭ ನೂರು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಹೀಗಾಗಿ ಕೊರೊನಾಗೆ ಇಷ್ಟೊಂದು ಪ್ರಾಮುಖ್ಯ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ರ ಆರ್ಥಿಕ ವರ್ಷದಲ್ಲಿ ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂ ನೀಡಿದ್ದಾರೆ. ಆದರೆ ಭಾರತಕ್ಕೆ ಬಹಳ ಅವಶ್ಯಕವಿರುವ ಪ್ರಾಥಮಿಕ ಆರೋಗ್ಯ ಸೇವೆಗೆ ಈ ಹಣವನ್ನು ನೀಡಲು ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದು ಹೇಳಿದ್ದಾರೆ.



