ಪತ್ತನಂತಿಟ್ಟು: ಹತ್ತನೇ ತರಗತಿಯ ಗಣಿತ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ದೂರು ದಾಖಲಿಸಲಾಗಿದೆ. ಮುತ್ತತುಕೋಣಂ ಎಸ್.ಎನ್.ಡಿ.ಪಿ.ಎಚ್.ಎಸ್.ಎಸ್.ನಲ್ಲಿ ಮುಖ್ಯ ಶಿಕ್ಷಕ ಎಸ್. ಸಂತೋಷ್ ಪರೀಕ್ಷೆ ಪ್ರಾರಂಭವಾದ ಅರ್ಧ ಘಂಟೆಯೊಳಗೆ, ಪ್ರಶ್ನಾವಳಿಯನ್ನು ಪತ್ತನಂತಿಟ್ಟು ಡಿಇಒ ಅಧಿಕೃತ ವಾಟ್ಸಾಪ್ ಗುಂಪಿನಲ್ಲಿ ಹಂಚಿಕೊಂಡಿದ್ದರು. ಅವರ ಸ್ವಂತ ಶಾಲಾ ಗುಂಪಿನಲ್ಲಿರುವ ಗಣಿತ ಶಿಕ್ಷಕರಿಗೆ ಇದನ್ನು ಹಂಚಿಕೆ ಮಾಡಲಾಗಿದ್ದು ಮತ್ತು ಕೆಲವು ಪ್ರಶ್ನೆಗಳನ್ನು ಪರಿಹರಿಸಲು ಮತ್ತು ಉತ್ತರಗಳನ್ನು ಪಡೆದು ವಿದ್ಯಾರ್ಥಿಗಳಿಗೆ ನೀಡುವ ಸಲುವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗುಂಪು 126 ಮುಖ್ಯೋಪಾಧ್ಯಾಯರನ್ನು ಒಳಗೊಂಡಿದೆ. ಅವರಲ್ಲಿ ಕೆಲವರು ತಕ್ಷಣ ಡಿಇಒಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ನಿನ್ನೆ ಬೆಳಿಗ್ಗೆ 9.40 ಕ್ಕೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತರಗತಿಗೆ ತೆರಳಿದ್ದರು. ಬೆಳಿಗ್ಗೆ 10 ಗಂಟೆಗೆ ಮಕ್ಕಳಿಗೆ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಯಿತು. ಮಧ್ಯಾಹ್ನ 12 ಗಂಟೆಗೆ ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಹೊರಬರುವವರೆಗೂ ಪ್ರಶ್ನೆ ಪತ್ರಿಕೆ ಉನ್ನತ ರಹಸ್ಯ ದಾಖಲೆಯಾಗಿರಬೇಕೆಂಬುದು ನಿಯಮ. ಬೆಳಿಗ್ಗೆ 10 ಗಂಟೆಗೆ ಪ್ರಶ್ನೆ ಪತ್ರಿಕೆ ನೀಡಿದ ನಂತರ ಬೆಳಿಗ್ಗೆ 10.30 ಕ್ಕೆ ಡಿಇಒ ಅವರ ವಾಟ್ಸಾಪ್ ಗುಂಪಿನಲ್ಲಿ ಪ್ರಶ್ನೆ ಪತ್ರಿಕೆಯ ಚಿತ್ರ ಕಾಣಿಸಿಕೊಂಡಿತು. ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳಿಂದ ಇದನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕ್ಲಿಷ್ಟಕರವಾದ ಪ್ರಶ್ನೆಗಳನ್ನು ಪರಿಹರಿಸಲು ಮತ್ತು ಉತ್ತರಿಸಲು ಪ್ರಶ್ನೆ ಪತ್ರಿಕೆಯ ಚಿತ್ರವನ್ನು ತೆಗೆದುಕೊಂಡು ಕಳುಹಿಸಲಾಗಿದೆ ಎಂದು ನಂಬಲಾಗಿದೆ. ತನ್ನದೇ ಶಿಕ್ಷಕರ ಗುಂಪಿಗೆ ಕಳುಹಿಸಿದ ಚಿತ್ರವು, ಹಂಚುವ ವೇಳೆ ಕೈತಪ್ಪಿನಿಂದ ಡಿಇಒಗಳ ಗುಂಪನ್ನು ತಲುಪಿತು ಎಂದು ಹೇಳಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಮುಖ್ಯ ಶಿಕ್ಷಕ ಸಂತೋಷ್ ಅವರು ಎಡ ಶಿಕ್ಷಕರ ಸಂಘ ಕೆ.ಎಸ್.ಟಿ.ಎ. ಕಾರ್ಯಕರ್ತರಾಗಿದ್ದಾರೆ. ಆದ್ದರಿಂದ, ಅವರನ್ನು ಬಚಾವ್ ಮಾಡಲು ಮೇಲಧಿಕಾರಿಗಳಾರೂ ತುಟಿ ಬಿಚ್ಚಿಲ್ಲ ಎನ್ನಲಾಗಿದೆ. ಪತ್ತನಂತಿಟ್ಟು ಡಿಇಒ ಅವರನ್ನು ಮಾಧ್ಯಮಗಳ ಪ್ರತಿನಿಧಿಗಳು ಈ ಬಗೆಗಿನ ಸ್ಪಷ್ಟೀಕರಣಕ್ಕೆ ಹಲವಾರು ಬಾರಿ ಕರೆ ಮಾಡಿದರೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು. ಹಿಂದಿನ ಪರೀಕ್ಷೆಗಳಲ್ಲಿ ಸಂತೋಷ್ ಇದೇರೀತಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿರಬಹುದು ಮತ್ತು ಅವರ ಪೋನ್ ನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇದೇ ವೇಳೆ, ಒಂದು ವಿಭಾಗವು ಸಂತೋಷ್ ಶಾಲಾ ಶಿಕ್ಷಕರ ಗುಂಪುಗಾರಿಕೆಗೆ ಬಲಿಯಾದರು ಎಂದು ಹೇಳುತ್ತಿವೆ. ಈ ಮಧ್ಯೆ ಸಂತೋಷ್ ಅವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ ಎಂಬ ಸೂಚನೆ ಲಭ್ಯವಾಗಿದೆ.