ಬಿಜಾಪುರ: ನಕ್ಸಲರು ಅಪಹರಿಸಿದ್ದ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ.
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಕೋಬ್ರಾ ಕಮಾಂಡೊ ಪಡೆಯ ರಾಕೇಶ್ವರ್ ಸಿಂಗ್ ಅವರನ್ನು ಏಪ್ರಿಲ್ 3ರಂದು ಛತ್ತೀಸಗಡದ ಬಸ್ತಾರ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಅಪಹರಿಸಲಾಗಿತ್ತು. ಗುಂಡಿನ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.
ಗುಡಿಸಲಲ್ಲಿ ಮನ್ಹಾಸ್ ಕುಳಿತಿರುವ ಚಿತ್ರವನ್ನು ಗುರುವಾರ (ಏ.8) ಬೆಳಗ್ಗೆ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಮನ್ಹಾಸ್ ಮಾತ್ರ ಇದ್ದು, ನಕ್ಸಲರು ಯಾರೂ ಕಾಣಿಸಿಕೊಂಡಿರಲಿಲ್ಲ.
ಸಿಂಗ್ ಅವರನ್ನು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಇಲ್ಲಿನ ದಟ್ಟ ಅರಣ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಬಳಿಕ ಅವರು ಸ್ಥಳೀಯ ಟೆರ್ರಂ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ರಾಕೇಶ್ವರ್ ಅವರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಸಿಆರ್ಪಿಎಫ್ ಕ್ಯಾಂಪಿಗೆ ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.