ತಿರುವನಂತಪುರ: ಎರಡನೇ ಬಾರಿ ಮೇ.20 ರಂದು ಅಧಿಕಾರಕ್ಕೇರಲಿರುವ ಎಲ್.ಡಿ.ಎಫ್ ಸರ್ಕಾರದ ಪ್ರಮಾಣವಚನ ಸಮಾರಂಭದ ಸ್ಥಳವನ್ನು ಬದಲಾಯಿಸಲಾಗುವುದಿಲ್ಲ. ನಿದಿದಿಪಡಿಸಿರುವಂತೆ ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲೇ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆದರೆ ಸಮಾರಂಭದಲ್ಲಿ ಭಾಗವಹಿಸುವವರ ಸಂಖ್ಯೆಯಲ್ಲಿ ಕಡಿತವಿರಲಿದೆ. ಕೋವಿಡ್ ಎರಡನೇ ಅಲೆಯ ವ್ಯಾಪಕತೆಯ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಟೀಕೆಗಳ ಮಧ್ಯೆ ಈ ಕಾರ್ಯಕ್ರಮಕ್ಕೆ ಹಾಜರಾಗುವವರ ಸಂಖ್ಯೆಯನ್ನು ಕಡಿಮೆ ಮಾಡಲು ಕೊನೆಗೂ ಎಲ್.ಡಿ.ಎಫ್ ಸಜ್ಜಾಗಿದೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಪ್ರಮಾಣವಚನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿವರಿಸಲಿದ್ದಾರೆ ಎಂದು ತಿಳಿದುಬಂದಿದೆ. ಗರಿಷ್ಠ 250-300 ಜನರಿಗೆ ಭಾಗವಹಿಸಲು ಸರ್ಕಾರ ನಿರ್ಧರಿಸಿದೆ. ಪ್ರಮಾಣವಚನ ಸಮಾರಂಭವು 20 ರಂದು ಮಧ್ಯಾಹ್ನ 3.30 ಕ್ಕೆ ನಿಗದಿಯಾಗಿದೆ. ಸೆಂಟ್ರಲ್ ಸ್ಟೇಡಿಯಂನಲ್ಲಿ ಟೆಂಟ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ತಿರುವನಂತಪುರದಲ್ಲಿ ಟ್ರಿಪಲ್ ಲಾಕ್ಡೌನ್ ನಿನ್ನೆ ರಾತ್ರಿಯಿಂದ ಜಾರಿಗೆ ಬಂದಿದೆ. ಹೆಚ್ಚಿನ ಜನರನ್ನು ಪಾಲ್ಗೊಳ್ಳಿಸಿ ಸಮಾರಂಭ ನಡೆಸುವುದರ ವಿರುದ್ಧ ಅನೇಕ ಭಾಗಗಳಿಂದ ಟೀಕೆಗಳು ಕೇಳಿಬಂದವು. 600 ಕ್ಕಿಂತ ಹೆಚ್ಚು ಜನರು ಭಾಗವಹಿಸುವರೆಂಬ ಸರ್ಕಾರದ ಹೇಳಿಕೆ ಜನಸಾಮಾನ್ಯರಿಗೆ ಕಳವಳಕ್ಕೆ ಕಾರಣವಾಗಿದ್ದು, ಸೋಂಕಿತರ ಸಂಖ್ಯೆಯನ್ನು ಹೆಚ್ಚಿಸಲಿದೆ ಎಂದು ಟೀಕೆಗಳು ಕೇಳಿಬಂದಿವೆ.