ಉಪ್ಪಳ: ಉಪ್ಪಳದ ಕ್ವಾರ್ಟರ್ಸ್ನಲ್ಲಿ ವಾಸವಿದ್ದ ಕುಟುಂಬವೊಂದರ 17 ರ ಹರೆಯದ ಬಾಲಕಿ ಮಂಗಳವಾರದಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಈಕೆಯ ಪತ್ತೆಗೆ ಪೋಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೋಲೀಸರು ಬಾಲಕಿಯ ಪತ್ತೆಗೆ ಸಾರ್ವಜನಿಕರ ಸಹಾಯ ಕೋರಿದ್ದಾರೆ.
ಉಪ್ಪಳ ಹಿದಾಯತ್ ಬಜಾರ್ ನ ತಮಾಂ ಫರ್ನೀಚರ್ ಶಾಪ್ ಬಳಿಯ ಕ್ವಾರ್ಟರ್ಸ್ ನಲ್ಲಿ ವಾಸಿಸುತ್ತಿದ್ದ ಕರ್ನಾಟಕ ಶಿವಮೊಗ್ಗ ಮೂಲದ ರೇಷ್ಮಾ ಎಂಬವರ ಪುತ್ರಿ ಸಾನಿಯಾ(17) ನಾಪತ್ತೆಯಾದ ಬಾಲಕಿ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಹಾಲು ಖರೀದಿಸಲು ಮನೆಯಿಂದ ಅಂಗಡಿಗೆ ತೆರಳಿದವಳು ಮರಳಿಲ್ಲ ಎಂದು ದೂರಲಾಗಿದೆ. ಮಂಜೇಶ್ವರ ಠಾಣೆಯ ಅಧಿಕಾರಿ ಎ. ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಪೋಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬಾಲಕಿ ನಡೆದು ಹೋಗುತ್ತಿರುವುದು ಕಂಡುಬಂದಿದೆ. ಕಾಸರಗೋಡು ಡಿವೈಎಸ್ಪಿ ಪಿ ಬಾಲಕೃಷ್ಣನ್ ನಾಯರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿರುವರು. ಬಾಲಕಿಯ ಬಗ್ಗೆ ಮಾಹಿತಿ ತಿಳಿದವರು ಪೋಲೀಸರ ಗಮನಕ್ಕೆ ವರದಿ ಮಾಡಬೇಕು ಎಂದು ಪೋಲೀಸರು ತಿಳಿಸಿದ್ದಾರೆ. ದೂರವಾಣಿ: 9497947263, 9497928800 ಕರೆಮಾಡಿ ಮಾಹಿತಿ ನೀಡಲು ಸೂಚಿಸಲಾಗಿದೆ.


