ನವದೆಹಲಿ: ದೇಶದಲ್ಲೇ ಮೊದಲು ಕೋವಿಡ್ ಪ್ರಕರಣ ದಾಖಲಾದ ಕೇರಳ ರಾಜ್ಯದಲ್ಲಿ ಈಗ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇ ಕೇರಳ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ಕ್ರಮ ಕೈಗೊಳ್ಳುತ್ತಿದೆ. ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಕೇರಳ ಎದುರಿಸುತ್ತಿರುವ ಒಂಬತ್ತು ವಿಶಿಷ್ಟ ಸವಾಲುಗಳನ್ನು ಗುರುತಿಸಲಾಗಿದೆ ಎಂದು ಕೇಂದ್ರ ಮಂಗಳವಾರ ಹೇಳಿದೆ.
ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ ಮತ್ತು ಕಳೆದ ವಾರ ಕೇಂದ್ರಕ್ಕೆ ವಿವರವಾದ ವರದಿಯನ್ನು ಸಲ್ಲಿಸಿದ್ದ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನ ನಿರ್ದೇಶಕರಾದ ಡಾ. ಸುಜೀತ್ ಕುಮಾರ್ ಸಿಂಗ್ ಒಂಬತ್ತು ವಿಶಿಷ್ಟ ಸವಾಲುಗಳನ್ನು ಮುಂದಿಟ್ಟಿದ್ದಾರೆ. ಅದರಲ್ಲಿ ''ಒಂದು ಪ್ರಮುಖ ಸವಾಲು ಎಂದರೆ, ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಅತಿ ಕಡಿಮೆ ಗಡಿರೇಖೆ ಇರುವುದು ಆಗಿದೆ. ಇದರಿಂದಾಗಿ ಹೆಚ್ಚಿನ ಒಳಾಂಗಣ ಪ್ರಸರಣ ಆಗುತ್ತದೆ,'' ಎಂದು ಡಾ. ಸುಜೀತ್ ಕುಮಾರ್ ಸಿಂಗ್ ಅಭಿಪ್ರಾಯಿಸಿದ್ದಾರೆ.
"ಗ್ರಾಮೀಣ-ನಗರ ವಿಭಜನೆಯು ತುಂಬಾ ಕ್ಷೀಣವಾಗಿದೆ. ನಾವು ಉತ್ತರ ಭಾರತದ ರಾಜ್ಯಗಳಲ್ಲಿ ನೋಡುವಂತೆ, ವಿಶೇಷವಾಗಿ ಅಧಿಕ ಜನಸಂಖ್ಯೆ ಇರುವ ರಾಜ್ಯಗಳಲ್ಲಿ, ಕೃಷಿ ಭೂಮಿಯು ಸೋಂಕಿನ ಹರಡುವಿಕೆಗೆ ನೈಸರ್ಗಿಕ ತಡೆಗೋಡೆ ಸೃಷ್ಟಿಸುತ್ತದೆ," ಎಂದ ಸುಜೀತ್ ಕುಮಾರ್ ಸಿಂಗ್, ''ಆದರೆ ಕೇರಳದಲ್ಲಿ ಮನೆಗಳು ರೇಖೀಯ ರೀತಿಯಲ್ಲಿ ಹರಡಿದೆ. ಮನೆಯ ಪ್ರತ್ಯೇಕತೆಯು ಅಲ್ಲಿ ಸರಿಯಾಗಿ ನಡೆಯುತ್ತಿಲ್ಲ," ಎಂದು ತಿಳಿಸಿದ್ದಾರೆ.
ಕೇರಳದಲ್ಲಿ ಮರು ಸೋಂಕು ಪ್ರಕರಣ ಅಧಿಕ
"ಕೇರಳ ರಾಜ್ಯವು ಹೆಚ್ಚಿನ ಸಂಖ್ಯೆಯ ಮರು-ಸೋಂಕಿನ ಪ್ರಕರಣಗಳನ್ನು ವರದಿ ಮಾಡುತ್ತಿದೆ. ಈ ಪೈಕಿ ಹಲವಾರು ಮಂದಿ ಎರಡೂ ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಆಗಿದ್ದಾರೆ," ಎಂದು ಸುಜೀತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. "ಜಿಲ್ಲಾಧಿಕಾರಿಯವರು ಹಂಚಿಕೊಂಡ ಮಾಹಿತಿಯಂತೆ, ಉದಾಹರಣೆಗೆ ಪಟ್ನಮ್ತಿಟ್ಟಾದಲ್ಲಿ ಎರಡು ಡೋಸ್ ಕೋವಿಡ್ ಲಸಿಕೆಗಳನ್ನು ಪಡೆದ ನಂತರ 5,042 ಮಂದಿ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಎರಡನೇ ಕೋವಿಡ್ ಲಸಿಕೆ ಡೋಸ್ ಪಡೆದ ನಂತರ ಎಷ್ಟು ಸಮಯದಲ್ಲಿ ಆ ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ನಾವು ಇನ್ನೂ ತನಿಖೆ ಮಾಡುತ್ತಿದ್ದೇವೆ. ಆ ವ್ಯಕ್ತಿಗೆ ತೀವ್ರ ಕಾಯಿಲೆ ಬಂದಿದೆಯೇ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆಯೇ ಎಂಬ ಮಾಹಿತಿಯನ್ನು ನಾವು ಕೇಳಿದ್ದೇವೆ," ಎಂದು ಸುಜೀತ್ ಕುಮಾರ್ ಹೇಳಿದ್ದಾರೆ.
72 ಗಂಟೆಯಲ್ಲಿ ಶೇ. 25-30 ಸಾವುಗಳು
"ಸಾಂಕ್ರಾಮಿಕವಲ್ಲದ ರೋಗಗಳ (ಎನ್ಸಿಡಿ) ಹರಡುವಿಕೆಯು ರಾಜ್ಯದಲ್ಲಿ ಶೇ. 30 ರ ಸಮೀಪದಲ್ಲಿದೆ. ಮೇ ಮತ್ತು ಜೂನ್ ನಲ್ಲಿ, ಶೇ. 25-30 ಕೋವಿಡ್ ಸಾವುಗಳು ಆಸ್ಪತ್ರೆಯಲ್ಲಿ 72 ಗಂಟೆಗಳ ಒಳಗೆ ಸಂಭವಿಸಿವೆ," ಎಂದು ಜೀತ್ ಕುಮಾರ್ ಹೇಳಿದ್ದಾರೆ. "ಎನ್ಸಿಡಿಗಳ ಅಧಿಕ ಹರಡುವಿಕೆಯು ಹೆಚ್ಚಿನ ರೋಗ ಹರಡುವಿಕೆಗೆ ಸಹಾಯ ಮಾಡುವ ಇನ್ನೊಂದು ಅಂಶವಾಗಿದೆ. ಮಧುಮೇಹದಿಂದ ಸೋಂಕಿನ ಪ್ರಮಾಣ ಹೆಚ್ಚಾಗುತ್ತದೆ," ಎಂದು ತಿಳಿಸಿದ್ದಾರೆ. ಎನ್ಸಿಡಿ ಎಂದರೆ ದೀರ್ಘಕಾಲೀನ ರೋಗಗಳೆಂದೂ ಕರೆಯಲ್ಪಡುವ ಸಾಂಕ್ರಾಮಿಕವಲ್ಲದ ರೋಗವಾಗಿದ್ದು ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಅವು ದೀರ್ಘಾವಧಿಯಾಗಿದ್ದು ಮತ್ತು ಸಾಮಾನ್ಯವಾಗಿ ನಿಧಾನಗತಿಯ ಪ್ರಗತಿಯನ್ನು ಹೊಂದುತ್ತದೆ.
ಡೆಲ್ಟಾ ರೂಪಾಂತರವೂ ಒಂದು ಸವಾಲು
ಸುಜೀತ್ ಕುಮಾರ್ ಸಿಂಗ್ ಪ್ರಕಾರ, ಇತರ ಎರಡು ಅಂಶಗಳು ಕೂಡಾ ಈ ಕೋವಿಡ್ ಸಾಂಕ್ರಾಮಿಕ ನಿಯಂತ್ರಣದ ಸವಾಲಾಗಿದೆ. ಶೇ. 55 ಸುಲಭವಾಗಿ ರೋಗಕ್ಕೆ ಒಳಗಾಗುವ ಜನಸಂಖ್ಯೆ ಮತ್ತು ರಾಜ್ಯದಲ್ಲಿ ಶೇ.90 ರಷ್ಟು ಕೋವಿಡ್ ಸಾಂಕ್ರಾಮಿಕ ಡೆಲ್ಟಾ ರೂಪಾಂತರದ ಪ್ರಗತಿಯೂ ಸಹ ಈ ಉಲ್ಬಣಕ್ಕೆ ದೊಡ್ಡ ಕಾರಣಗಳಾಗಿವೆ. ಹಾಗೆಯೇ ಕೇರಳದಲ್ಲಿ ಹೆಚ್ಚಿನ ಜೀವಿತಾವಧಿಯಿಂದಾಗಿ ಕೇರಳವು ವೃದ್ಧ ಜನಸಂಖ್ಯೆಯ ಹೆಚ್ಚಿನ ಪ್ರಮಾಣವನ್ನು ಹೊಂದಿದೆ. "ಇದು ಒಂದು ಅತೀ ಹೆಚ್ಚು ಕೋವಿಡ್ ಸೋಂಕಿಗೆ ಒಳಗಾಗುವ ಜನಸಂಖ್ಯೆ" ಆಗಿದೆ. "ಇನ್ನೊಂದು ವಿಷಯವು ಗಣನೀಯ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಲಸೆಯಾಗಿದೆ" ಎಂಬುವುದನ್ನು ಕೂಡಾ ಸಿಂಗ್ ಗುರುತಿಸಿದ್ದಾರೆ. ಸ್ಥಳೀಯ ಲಾಕ್ಡೌನ್ಗಳಂತಹ "ಕಟ್ಟುನಿಟ್ಟಾದ ಸಾರ್ವಜನಿಕ ಆರೋಗ್ಯ ಕ್ರಮಗಳು" ಪ್ರಸರಣವನ್ನು ಅಡ್ಡಿಪಡಿಸಲು ಅಗತ್ಯವಿದೆ ಎಂದು ಹೇಳಿದ್ದಾರೆ.
ಸವಾಲಿನ ಸನ್ನಿವೇಶವನ್ನು ಸೃಷ್ಟಿಸಿದೆ
ಹಲವಾರು ಚಟುವಟಿಕೆಗಳನ್ನು ತೆರೆಯುವುದು, ಆಗಸ್ಟ್ 20 ರಂದು ಓಣಂ ಹಬ್ಬ ಮತ್ತು ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ತೆರೆಯುವುದು "ಸವಾಲಿನ ಸನ್ನಿವೇಶವನ್ನು ಸೃಷ್ಟಿಸಿದೆ" ಎಂದು ಸಿಂಗ್ ಅಭಿಪ್ರಾಯಿಸಿದ್ದಾರೆ. ಕೇರಳದ ಪ್ರಸ್ತುತ ಆರ್ ಮೌಲ್ಯ 1.12 ಎಂದು ಉಲ್ಲೇಖ ಮಾಡಿದ ಸುಜೀತ್ ಕುಮಾರ್ ಸಿಂಗ್ "ಪ್ರಸ್ತುತ ಪ್ರವೃತ್ತಿಯ ಪ್ರಕಾರ, ಆಗಸ್ಟ್ 1 ರಿಂದ 20 ರ ಅವಧಿಯಲ್ಲಿ, ರಾಜ್ಯವು 4.62 ಲಕ್ಷ ಪ್ರಕರಣಗಳಿಗೆ ಸಾಕ್ಷಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ," ಎಂದಿದ್ದಾರೆ.








