ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳ್ಳಸಾಗಾಟಗಾರರ ಕ್ಯಾಪ್ಟನ್ ಆಗಿದ್ದು, ಪ್ರತಿಪಕ್ಷದ ಪ್ರಶ್ನೆಗಳಿಗೆ ವಿಧಾನಸಭೆಯಲ್ಲಿ ಉತ್ತರಿಸಲು ಹಿಂದೇಟು ಹಾಕುವ ಮೂಲಕ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿರುವುದಾಗಿ ಐಕ್ಯರಂಗ ಸಂಚಾಲಕ ಎಂ. ಎಂ. ಹಸನ್ ತಿಳಿಸಿದ್ದಾರೆ.
ಅವರು ಬೋವಿಕ್ಕಾನದಲ್ಲಿ ಆಯೋಜಿಸಲಾಗಿದ್ದ ಜನಶ್ರೀ ಸುಸ್ಥಿರ ಮಿಶನ್ನ ಕಾಸರಗೋಡು ಜಿಲ್ಲಾ ಮಟ್ಟದ ಶಿಬಿರ ಉದ್ಘಾಟಿಸಲು ಆಗಮಿಸಿದ್ದ ಸಂದರ್ಭ ಪತ್ರಕರ್ತರ ಜತೆ ಮಾತನಾಡಿದರು. ಚುನಾವಣೆಗೆ ಮೊದಲು ಕೇರಳದ ಕ್ಯಾಪ್ಟನ್ ತಾನೆಂದು ತಿರುಗಾಡುತ್ತಿದ್ದ ಪಿಣರಾಯಿ ವಿಜಯನ್, ಚಿನ್ನಸಾಗಾಟ, ಡಾಲರ್ ಸಾಗಾಟ ವಿಷಯಗಳಲ್ಲಿ ತನ್ನ ಹೆಸರು ತಳಕುಹಾಕಿಕೊಂಡಿರುವ ಹಿನ್ನೆಲೆಯಲ್ಲಿ ತಾನು ಯಾವ ವಿಷಯದಲ್ಲಿ ಕ್ಯಾಪ್ಟನ್ ಎಂಬುದನ್ನು ಜನರಿಗೆ ಸ್ಪಷ್ಟಪಡಿಸಬೇಕು. ತಪ್ಪು ಮಾಡದೇ ಇದ್ದಲ್ಲಿ ಮುಖ್ಯಮಂತ್ರಿ, ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸದೆ ನುಣುಚಿಕೊಳ್ಳಲು ಕಾರಣವೇನು ಎಂದೂ ಹಸನ್ ಪ್ರಶ್ನಿಸಿದರು. ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್, ಕಾಸರಗೋಡು ಮಂಡಲ ಐಕ್ಯರಂಗ ಸಂಚಾಲಕ ಕರುಣ್ ಥಾಪ ಮುಂತಾದವರು ಉಪಸ್ಥಿತರಿದ್ದರು.