ನವದೆಹಲಿ: ಭಾರತೀಯ ಸೇನೆಯ ಆಯ್ಕೆ ಮಂಡಳಿಯು 26 ವರ್ಷ ಸೇವೆ ಪೂರೈಸಿದ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್ (ಸೇವಾವಧಿ ಆಧರಿತ - ಟೈಮ್ ಸ್ಕೇಲ್) ಶ್ರೇಣಿಗೆ ಬಡ್ತಿ ನೀಡಲು ಹಾದಿಯನ್ನು ಮುಕ್ತಗೊಳಿಸಿದೆ. ʻಕಾರ್ಪ್ಸ್ ಆಫ್ ಸಿಗ್ನಲ್ಸ್ʼ, ʻಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ʼ ಮತ್ತು ʻಮೆಕ್ಯಾನಿಕಲ್ ಎಂಜಿನಿಯರ್ಸ್ʼ (ಇಎಂಇ) ಹಾಗೂ ʻಕಾರ್ಪ್ಸ್ ಆಫ್ ಎಂಜಿನಿಯರ್ಸ್ʼನೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳಗೆ ಕರ್ನಲ್ ಶ್ರೇಣಿಗೆ ಬಡ್ತಿ ಪಡೆಯಲು ಅನುಮೋದಿಸಿರುವುದು ಇದೇ ಮೊದಲು. ಈ ಹಿಂದೆ, ʻಸೇನಾ ವೈದ್ಯಕೀಯ ಪಡೆʼ (ಎಎಂಸಿ), ʻನ್ಯಾಯಾಧೀಶ ಅಡ್ವೊಕೇಟ್ ಜನರಲ್ʼ (ಜೆಎಜಿ) ಮತ್ತು ʻಸೇನಾ ಶಿಕ್ಷಣ ಪಡೆʼ (ಎಇಸಿ) ಮಹಿಳಾ ಅಧಿಕಾರಿಗಳಿಗೆ ಮಾತ್ರ ಕರ್ನಲ್ ಹುದ್ದೆಗೆ ಬಡ್ತಿ ಅನ್ವಯವಾಗಿಗುತ್ತಿತ್ತು.
ಭಾರತೀಯ ಸೇನೆಯ ಹೆಚ್ಚಿನ ಶಾಖೆಗಳಿಗೆ ಬಡ್ತಿ ಮಾರ್ಗಗಳ ವಿಸ್ತರಣೆಯು ಮಹಿಳಾ ಅಧಿಕಾರಿಗಳಿಗೆ ವೃತ್ತಿ ಅವಕಾಶಗಳು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಈಗಾಗಲೇ ಭಾರತೀಯ ಸೇನೆಯ ಬಹುಪಾಲು ಶಾಖೆಗಳ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವಾವಧಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರೊಂದಿಗೆ, ಈಗಿನ ಕ್ರಮವು ಭಾರತೀಯ ಸೇನೆಯ ಲಿಂಗ-ತಟಸ್ಥ ನಿಲುವನ್ನು ವ್ಯಾಖ್ಯಾನಿಸುತ್ತದೆ.
ಸೇವಾವಧಿ ಆಧರಿತವಾಗಿ ಕರ್ನಲ್ ಶ್ರೇಣಿಗೆ ಆಯ್ಕೆಯಾದ ಐದು ಮಹಿಳಾ ಅಧಿಕಾರಿಗಳಗಳೆಂದರೆ ʻಕಾರ್ಪ್ಸ್ ಆಫ್ ಸಿಗ್ನಲ್ಸ್ʼನ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದಾನ, ʻಇಎಂಇ ಕಾರ್ಪ್ಸ್ʼನ ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್ ಮತ್ತು ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್ ಮತ್ತು ʻಕಾರ್ಪ್ಸ್ ಆಫ್ ಎಂಜಿನಿಯರ್ಸ್ʼನ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಹಾಗೂ ಲೆಫ್ಟಿನೆಂಟ್ ಕರ್ನಲ್ ರಿಚಾ ಸಾಗರ್.
ಎನ್ಡಿಎ ಪರೀಕ್ಷೆಗೆ ಅನುಮತಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಸೆಪ್ಟೆಂಬರ್ 5ರಂದು ನಡೆಸುತ್ತಿರುವ ಪ್ರವೇಶ ಪರೀಕ್ಷೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೌಕಾಪಡೆ ಅಕಾಡೆಮಿ ಪರೀಕ್ಷೆ, ಎನ್ಡಿಎಯಲ್ಲಿ ತರಬೇತಿಗಾಗಿ ಅರ್ಹ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.
ರಾಷ್ಟ್ರೀಯ ಭದ್ರತಾ ಪಡೆಯಲ್ಲಿ ಲಿಂಗಸಮಾನತೆ ಸಾಧಿಸಲು ಇದು ಮಹತ್ವದ ಹೆಜ್ಜೆ ಎನ್ನಲಾಗಿದೆ. ಈ ಪರೀಕ್ಷೆಯ ಫಲಿತಾಂಶ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಮಹಿಳಾ ಅಭ್ಯರ್ಥಿಗಳು ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟು ಪರೀಕ್ಷೆ ಬರೆಯಬಹುದು ಎಂದು ಸ್ಪಷ್ಟನೆ ನೀಡಿದೆ.
ಎನ್ಡಿಎ ಹಾಗೂ ನೌಕಾದಳ ಅಕಾಡೆಮಿ ಪರೀಕ್ಷೆಗಳಿಗೆ ಹಾಜರಾಗಲು ಮಹಿಳಾ ಅಭ್ಯರ್ಥಿಗಳಿಗೆ ಅನುಮತಿ ನೀಡದ ಕೇಂದ್ರದ ನೀತಿಯನ್ನು ಪ್ರಶ್ನಿಸಿ ಈ ಮುನ್ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ಹೃಷಿಕೇಶ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ, "ಭೂಸೇನೆ ಹಾಗೂ ನೌಕಾಪಡೆಯಲ್ಲ ಮಹಿಳೆಯರನ್ನು ಕಾಯಂ ಸೇವೆಗೆ ನಿಯೋಜಿಸಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದರೂ ಸರ್ಕಾರ ಈ ನೀತಿ ಅನುಸರಿಸಲು ಕಾರಣವೇನು" ಎಂದು ಪ್ರಶ್ನಿಸಿದೆ.