HEALTH TIPS

ಗಾನ ಗಂಧರ್ವ, ಸವ್ಯಸಾಚಿ ಭಾಗವತ ಪದ್ಯಾಣ ಗಣಪತಿ ಭಟ್ ಅಸ್ತಂಗತ

        ಮಂಗಳೂರು: ತೆಂಕುತಿಟ್ಟು ಯಕ್ಷಗಾನ ರಂಗದ ಅಗ್ರಮಾನ್ಯ ಭಾಗವತರಾದ ಗಾನ ಗಂಧರ್ವ ಪದ್ಯಾಣ ಗಣಪತಿ ಭಟ್(66) ಅವರು ಮಂಗಳವಾರ ಬೆಳಿಗ್ಗೆ ತಮ್ಮ ಕಲ್ಮಡ್ಕದ ಸ್ವಗೃಹದಲ್ಲಿ ನಿಧನರಾದರು.
        ಕೆಲವು ತಿಂಗಳ ಹಿಂದೆ ಕೊರೊನಾ ಅವರನ್ನು ಬಾಧಿಸಿತ್ತು. ಆ ಬಳಿಕ ನ್ಯೂಮೋನಿಯಾಕ್ಕೆ ತಿರುಗಿತ್ತು. ಈ ನಡುವೆ ಹೃದಯ ಸಂಬಂಧಿ ಕಾಯಿಲೆಯೂ ಅವರನ್ನು ಕಾಡಿತ್ತು.  ಇಂದು ಬೆಳಿಗ್ಗೆ ಉಲ್ಲಾಸದಿಂದಲೇ ಇದ್ದ ಪದ್ಯಾಣರು, ಹೃದಯಾಘಾತದಿಂದ ನಿಧನರಾಗಿ ಯಕ್ಷಗಾನ ಲೋಕಕ್ಕೆ ಆಘಾತ ಉಂಟು ಮಾಡಿದ್ದಾರೆ.
        ರಂಗದಲ್ಲಿ ತಮ್ಮ ವಿಶಿಷ್ಟ ಶ್ಯೆಲಿಯ  ಕಂಠಸಿರಿಯ ಮೂಲಕ ಚಕಿತಗೊಳಿಸುತ್ತಿದ್ದ   ಪದ್ಯಾಣ ಅವರ ಹಠಾತ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಯಕ್ಷಗಾನ ಅಭಿಮಾನಿಗಳು, ಆಘಾತಕ್ಕೀಡಾದರು. ಸಾಮಾಜಿಕ ಮಾಧ್ಯಮಗಳಲ್ಲೆಲ್ಲಾ ಯಕ್ಷಗಾನ ಅಭಿಮಾನಿಗಳು ಕಳವಳ ವ್ಯಕ್ತಪಡಿಸಿ  ಕಂಬನಿ ಸುರಿಸಿದ್ದಾರೆ.
       ಯಕ್ಷಗಾನ ಸಹಿತ ಸಾಂಸ್ಕ್ರತಿಕ ರಂಗಕ್ಕೆ ಪದ್ಯಾಣ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಗ್ರಾಮ  ಪದ್ಯಾಣದ ಕೊಡುಗೆ ಅಪಾರ. ಪದ್ಯಾಣ ತಿರುಮಲೇಶ್ವರ ಭಟ್ಟ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ 1955ರಲ್ಲಿ ಗಣಪತಿ ಭಟ್ ಜನಿಸಿದ್ದರು. ಆ ಕಾಲದಲ್ಲಿ ಭಾಗವತಿಕೆಗೆ ಹೆಸರಾಗಿದ್ದ ಅಜ್ಜ ಪುಟ್ಟು ನಾರಾಯಣ ಭಟ್ಟರಿಂದಲೇ ಭಾಗವತಿಕೆಯ ಪ್ರಾಥಮಿಕ ಪಾಠ ಪಡೆದು, ಬಳಿಕ ಮಾಂಬಾಡಿ ನಾರಾಯಣ ಭಾಗವತರಲ್ಲಿ ಅಭ್ಯಾಸ ಮುಂದುವರಿಸಿದರು.
      ಭಾಗವತಿಕೆಯ ಸೂಕ್ಷ್ಮಪಾಠ, ತಾಳಗತಿ ಹಾಗೂ ಪಟ್ಟುಗಳಲ್ಲಿ ಪರಿಣತಿ ಹೊಂದಿದ್ದ ಗಣಪತಿ ಭಟ್ಟರು ತಮ್ಮ 16ರ ವಯಸ್ಸಿನಲ್ಲೇ ಚೌಡೇಶ್ವರೀ ಮೇಳಕ್ಕೆ ಸಂಗೀತಗಾರರಾಗಿ ಸೇರುವ ಮೂಲಕ ತಮ್ಮ ಪದ ಯಾನ ಆರಂಭಿಸಿದ್ದರು. ಬಳಿಕ ಕುಂಡಾವು ಮೇಳ, ಕಸ್ತೂರಿ ವರದರಾಯ ಪೈ ಯಾಜಮಾನ್ಯದ ಸುರತ್ಕಲ್‌ ಮೇಳ ಸೇರಿ ಖ್ಯಾತಿಯ ಉತ್ತುಂಗಕ್ಕೇರಿದರು.
      ಯಕ್ಷರಂಗದ ಭೀಷ್ಮ ಎಂದು ಕರೆಸಿಕೊಂಡಿರುವ ಡಾ.ಶೇಣಿ ಗೋಪಾಲಕೃಷ್ಣ ಭಟ್ಟ, ಯಕ್ಷರಂಗದ ಮತ್ತೊಬ್ಬ ವಿದ್ವಾಂಸ ಶಂಕರನಾರಾಯಣ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ್‌, ಕುಂಬ್ಳೆ ಸುಂದರ ರಾವ್‌ ಮೊದಲಾದ ಕಲಾವಿದರೊಂದಿಗೆ ಸುರತ್ಕಲ್‌ ಮೇಳದಲ್ಲಿ ಪದ್ಯಾಣರು ತಮ್ಮ ಇಂಪಾದ ಕಂಠ, ಏರು ಶ್ರುತಿ, ಭಾವನಾತ್ಮಕ ಗಾಯನದಿಂದ ಯಕ್ಷರಂಗಕ್ಕೆ ತಮ್ಮದೇ ಆದ ಶೈಲಿಯ ಕೊಡುಗೆ ನೀಡಿದರು.
       ಸುರತ್ಕಲ್ ಮೇಳವು ತಿರುಗಾಟ ನಿಲ್ಲಿಸಿದ ತರುವಾಯ ಅವರು ಬಪ್ಪನಾಡು, ಮಂಗಳಾದೇವಿ, ಕರ್ನಾಟಕ, ಎಡನೀರು ಹಾಗೂ ಹೊಸನಗರ ಮೇಳಗಳಲ್ಲಿ ತಮ್ಮ ಕಲಾಯಾನ ನಡೆಸಿ, ಕಂಠ ಸಿರಿಯನ್ನು ಹರಿಸಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡರು.  ಸರ್ವಜನಮಾನ್ಯರಾದ, ಸಜ್ಜನ ಪದ್ಯಾಣರು ಗಾನಗಂಧರ್ವರೆಂದೇ ಖ್ಯಾತರಾದವರು. ಯಕ್ಷಗಾನದ ಅಮೂಲ್ಯ ಕೊಂಡಿಯೊಂದು ಕಳಚಿಬಿದ್ದಂತಾಗಿದೆ.
      ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿದ್ದು, ಅಭಿಮಾನಿಗಳು ಸನ್ಮಾನಿಸಿದ್ದಾರೆ. 60ರ ಸಂದರ್ಭದಲ್ಲಿ ಪದ್ಯಾಣ ಪದಯಾನ ಎಂಬ ಅಭಿನಂದನ ಗ್ರಂಥ ಗೌರವವನ್ನು ಅಭಿಮಾನಿಗಳು ಅವರಿಗೆ ಅರ್ಪಿಸಿದ್ದಾರೆ. ಈ-ಟಿವಿಯ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಭಾಗವಹಿಸಿದ ಯಕ್ಷಗಾನದ ಭಾಗವತರೆಂಬ ಕೀರ್ತಿ ಅವರದು.
      ಪದ್ಯಾಣ ಗಣಪತಿ ಭಟ್ ಅವರನ್ನು ಕಳೆದುಕೊಂಡ ಯಕ್ಷಗಾನ ರಂಗವು ಬಡವಾಗಿದೆ. ತಮ್ಮದೇ ಶೈಲಿಯ ಮೂಲಕ ರಂಗದಲ್ಲಿ ಹುಚ್ಚೆಬ್ಬಿಸುತ್ತಿದ್ದ, ಕಲಾವಿದರನ್ನು ಹುರಿದುಂಬಿಸುತ್ತಿದ್ದ ಪದ್ಯಾಣರು ಪದ ಯಾನದಲ್ಲಿ ಮಂಗಳಪದ ಹಾಡಿ ನಿರ್ಗಮಿಸಿದ್ದಾರೆ.
           ಭಾಗವತರು ಪತ್ನಿ ಶೀಲಾಶಂಕರಿ, ಇಬ್ಬರು ಮಕ್ಕಳು ಸ್ವಸ್ತಿಕ್ ಹಾಗೂ ಕಾರ್ತಿಕ್, ಅಪಾರ ಅಭಿಮಾನಿಗಳು,ಬಂಧು ಬಳಗವನ್ನು ಅಗಲಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries