ಇಂದೋರ್: ವಿಸ್ತಾರ ವಿಮಾನದಲ್ಲಿ ದೆಹಲಿಯತ್ತ ಹೊರಟಿದ್ದ ಪ್ರಯಾಣಿಕರೊಬ್ಬರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು, ಮೂರ್ಛೆ ತಪ್ಪಿದ ಕಾರಣ, ವಿಮಾನವನ್ನು ತುರ್ತಾಗಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಬೆಂಗಳೂರಿನಿಂದ ಹೊರಟ ವಿಸ್ತಾರ ಯುಕೆ-818 ವಿಮಾನದಲ್ಲಿದ್ದ ಮನೋಜ್ ಕುಮಾರ್ ಅಗರವಾಲ್ ಎಂಬುವವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡು, ಮೂರ್ಚೆ ಹೋದರು. ಹೀಗಾಗಿ ದೆಹಲಿಯತ್ತ ಹೋಗುತ್ತಿದ್ದ ವಿಮಾನವನ್ನು ಗುರುವಾರ ರಾತ್ರಿ 9.30ಕ್ಕೆ ತುರ್ತಾಗಿ ಇಂದೋರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.
ನಂತರ ಅಗರವಾಲ್ ಅವರನ್ನು ಸಮೀಪದ ಬಂಥಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ವಿಮಾನ ನಿಲ್ದಾಣದ ಉಸ್ತುವಾರಿ ನಿರ್ದೇಶಕ ಪ್ರಮೋದ್ ಕುಮಾರ್ ಶರ್ಮಾ ತಿಳಿಸಿದರು.
'ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಸಾಗುವ ಮಾರ್ಗದಲ್ಲಿ ಅಗರವಾಲ್ ಸಾವನ್ನಪ್ಪಿದರು. ಅವರ ಸ್ಥಿತಿಯನ್ನು ಗಮನಿಸಿದಾಗ, ಹೃದಯಾಘಾತಕ್ಕೆ ಒಳಗಾಗಿರಬಹುದು ಎಂಬುದಾಗಿ ಅನಿಸುತ್ತದೆ' ಎಂದು ಆಸ್ಪತ್ರೆಯ ನಿರ್ದೇಶಕ ಡಾ ಸುನಿಲ್ ಬಂಥಿಯಾ ಹೇಳಿದರು.
'ಅಗರವಾಲ್ ದೆಹಲಿ ಮೂಲದವರು. ಮರಣೋತ್ತರ ಪರೀಕ್ಷೆಯ ನಂತರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು' ಎಂದು ವಿಮಾನ ನಿಲ್ದಾಣದ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.