ಪಾಲಕ್ಕಾಡ್: ಶಬರಿಮಲೆ ವ್ರತಾಚರಣೆಗೆ ಅನುಮತಿ ಕೋರಿದ ಅಧಿಕಾರಿಯೊಬ್ಬರಿಗೆ ಭತ್ಯೆ ರದ್ದು ಮಾಡುವುದಾಗಿ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದೆ. ಪಾಲಕ್ಕಾಡ್ ಶೋರ್ನೂರ್ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಶಬರಿಮಲೆ ವ್ರತಾನುಷ್ಠಾನಕ್ಕೆ(ಅಯ್ಯಪ್ಪ ಸ್ವಾಮಿ ಮಾಲಧಾರಣೆ) ಅನುಮತಿ ಕೋರಿದ್ದರು. ಆದರೆ, ದೀಕ್ಷಾ ಅವಧಿಯ ಭತ್ಯೆಯನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿತ್ತು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ವಿವಾದದ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಆದೇಶವನ್ನು ಬಳಿಕ ಹಿಂಪಡೆದಿದ್ದಾರೆ. ಸಾಮಾನ್ಯವಾಗಿ ಶಬರಿಮಲೆಗೆ ವ್ರತಕ್ಕೆ ತೆರಳಲು ಪೊಲೀಸ್, ಅರಣ್ಯ ಇಲಾಖೆ, ಕಂದಾಯ ಇಲಾಖೆಗಳ ನೌಕರರ ಸಹಿತ ಎಲ್ಲರೂ ಅನುಮತಿ ಪಡೆಯಬೇಕಾಗುತ್ತದೆ. ಅಂತಹ ಅನುಮತಿಯ ಕೋರಿಕೆಯ ಪ್ರತಿಕ್ರಿಯೆಯು ವಿವಾದಾಸ್ಪದವಾಗಿತ್ತು.
ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ನ.30ರಂದು ಆದೇಶ ಹೊರಡಿಸಿದ್ದರು. ಶಬರಿಮಲೆಗೆ ತೆರಳಲು ವ್ರತಾನುಷ್ಠಾನ ಮಾಡಬಹುದು. ಆದರೆ, ಆ ವೇಳೆ ಗಡ್ಡ, ಕೂದಲು ಬೆಳೆಸಿದರೆ ವಿಶೇಷ ಭತ್ಯೆ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದು ಅಗ್ನಿಶಾಮಕ ದಳದಲ್ಲಿ ಟೀಕೆಗೆ ಕಾರಣವಾಗಿತ್ತು.