ಆನಂದ್: 'ಕೃಷಿಯನ್ನು ಪ್ರಯೋಗಾಲಯಗಳಿಂದ ಹೊರಗೆ ತಂದು ಪ್ರಕೃತಿಯ ಜೊತೆಗೆ ಮರುಜೋಡಿಸುವ ಕೆಲಸ ಆಗಬೇಕು. ಸಾವಯವ ಮತ್ತು ಸಹಜ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕೃಷಿಕರಿಗೆ ಸಲಹೆ ಮಾಡಿದರು.
ಆನಂದ್: 'ಕೃಷಿಯನ್ನು ಪ್ರಯೋಗಾಲಯಗಳಿಂದ ಹೊರಗೆ ತಂದು ಪ್ರಕೃತಿಯ ಜೊತೆಗೆ ಮರುಜೋಡಿಸುವ ಕೆಲಸ ಆಗಬೇಕು. ಸಾವಯವ ಮತ್ತು ಸಹಜ ಕೃಷಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕೃಷಿಕರಿಗೆ ಸಲಹೆ ಮಾಡಿದರು.
ಸಹಜ ಕೃಷಿ ಕುರಿತು ಇಲ್ಲಿ ನಡೆದ ರಾಷ್ಟ್ರಮಟ್ಟದ ಸಮಾವೇಶದಲ್ಲಿ ವರ್ಚುಯಲ್ ವೇದಿಕೆಯಲ್ಲಿ ಮಾತನಾಡಿದ ಅವರು, ಹೊಲದಲ್ಲಿಯೇ ಒಣಹುಲ್ಲು ಸುಡುವ ಪದ್ಧತಿ ಕುರಿತಂತೆಯೂ ಕಳವಳ ವ್ಯಕ್ತಪಡಿಸಿದರು. ಇಂಥ ಕ್ರಮಗಳು ಕೃಷಿಭೂಮಿ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿವೆ ಎಂದು ಎಚ್ಚರಿಸಿದರು.
'ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇದು ಸಕಾಲ. ಹಸಿರುಕ್ರಾಂತಿಯಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಪಾತ್ರ ಮುಖ್ಯವಾಗಿತ್ತು ಎಂಬುದು ನಿಜ. ಈಗ, ಅವುಗಳಿಗೆ ಪರ್ಯಾಯವನ್ನು ಹುಡುಕುವ ಕಾಲ ಹತ್ತಿರವಾಗಿದೆ. ಮುಂಜಾಗ್ರತೆಯು ಉಪಶಮನ ಕ್ರಮಕ್ಕಿಂತಲೂ ಮುಖ್ಯವಾದುದು' ಎಂದು ಕಿವಿಮಾತು ಹೇಳಿದರು.
ರಾಸಾಯನಿಕ, ರಸಗೊಬ್ಬರಗಳ ಆಮದು ವೆಚ್ಚ ಹೆಚ್ಚುತ್ತಿದೆ. ಕೃಷಿ ಉತ್ಪನ್ನಗಳು ದುಬಾರಿ ಆಗುತ್ತಿವೆ. ರಸಗೊಬ್ಬರ ಬಳಸದಿದ್ದರೆ ಅಧಿಕ ಇಳುವರಿ ಬರುವುದಿಲ್ಲ ಎಂಬ ತಪ್ಪುಗ್ರಹಿಕೆಯೂ ರೈತರಲ್ಲಿದೆ ಎಂದು ಹೇಳಿದರು.
'ಸಹಜಕೃಷಿಯೂ ವೈಜ್ಞಾನಿಕ ಪದ್ಧತಿಯಾಗಿದೆ. ಪರಿಣತರ ಪ್ರಕಾರ, ಜಾನುವಾರುಗಳು ಸಾವಯವ ಕೃಷಿಯಲ್ಲಿ ಮುಖ್ಯಪಾತ್ರ ವಹಿಸಲಿವೆ. ಅವುಗಳ ಸಗಣಿ, ಗಂಜಲವನ್ನು ರಸಗೊಬ್ಬರ ಮತ್ತು ಕೀಟನಾಶಕವಾಗಿ ಬಳಸಬಹುದು. ಇದರಿಂದ ಕೃಷಿ ವೆಚ್ಚ ತಗ್ಗಲಿದೆ. ಸಹಜ ಕೃಷಿಯು ಸಣ್ಣ, ಅತಿಸಣ್ಣ ರೈತರಿಗೆ ಹೆಚ್ಚು ಲಾಭಕರವಾಗಿದೆ' ಎಂದರು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇತರೆ ಕೆಲವು ಸಂಸ್ಥೆಗಳು ಈಗ 'ಪ್ರಯೋಗಾಲಯದಿಂದ ಮಣ್ಣಿಗೆ' ಚಿಂತನೆಯನ್ನು ಅಳವಡಿಸಿಕೊಂಡು, ತಳಮಟ್ಟದಲ್ಲಿ ಕೃಷಿಕರಿಗೆ ನೆರವಾಗಬೇಕು. ಎಲ್ಲ ರಾಜ್ಯ ಸರ್ಕಾರಗಳೂ ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.