ನವದೆಹಲಿ: ಆರೋಪಿಗಳು ಕಸ್ಟಡಿಯಲ್ಲಿರುವಾಗ ನೀಡಲಾಗುವ ಚಿತ್ರಹಿಂಸೆಗೆ ಕಡಿವಾಣ ಹಾಕುವುದಕ್ಕಾಗಿ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನು ಅಂತಿಮಗೊಳಿಸದ ಗೃಹ ಸಚಿವಾಲಯದ ಕ್ರಮಕ್ಕೆ ಸಂಸದೀಯ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ನವದೆಹಲಿ: ಆರೋಪಿಗಳು ಕಸ್ಟಡಿಯಲ್ಲಿರುವಾಗ ನೀಡಲಾಗುವ ಚಿತ್ರಹಿಂಸೆಗೆ ಕಡಿವಾಣ ಹಾಕುವುದಕ್ಕಾಗಿ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ತರಲು ಉದ್ದೇಶಿಸಿರುವ ತಿದ್ದುಪಡಿಗಳನ್ನು ಅಂತಿಮಗೊಳಿಸದ ಗೃಹ ಸಚಿವಾಲಯದ ಕ್ರಮಕ್ಕೆ ಸಂಸದೀಯ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಐಪಿಸಿಗೆ ತಿದ್ದುಪಡಿ ತರುವುದಾಗಿ ಸಚಿವಾಲಯವು ಐದು ವರ್ಷಗಳ ಹಿಂದೆಯೇ ಸಂಸತ್ಗೆ ಭರವಸೆ ನೀಡಿತ್ತು. ಆದರೆ, ಈಗ ಸಚಿವಾಲಯ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದು, ಈ ವಿಷಯದ ಕುರಿತು ಗಂಭೀರವಾಗಿಲ್ಲ ಎಂದೂ ಸಮಿತಿ ಟೀಕಿಸಿದೆ.
ಸಂಸತ್ಗೆ ನೀಡಿರುವ ಭರವಸೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಆಗುತ್ತಿರುವ ವಿಳಂಬ ಕುರಿತು ಗೃಹ ಸಚಿವಾಲಯವು ಸಮಿತಿಗೆ ನೀಡಿರುವ ಪ್ರತಿಕ್ರಿಯೆ ಕೂಡ ಗಮನವನ್ನು ಬೇರೆಡೆ ಎಳೆಯುವ ಪ್ರಯತ್ನವೇ ಆಗಿದೆ' ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.
'ಈ ವಿಷಯಯವನ್ನು ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಬೇಕು. ಐಪಿಸಿಯ ಸೆಕ್ಷನ್ 330 ಹಾಗೂ 331ಕ್ಕೆ ತಿದ್ದುಪಡಿಗಳನ್ನು ಅಂತಿಮಗೊಳಿಸುವುದಕ್ಕೆ ಸಂಬಂಧಿಸಿದ ಕಾರ್ಯವನ್ನು ತ್ವರಿತಗೊಳಿಸಬೇಕು' ಎಂದು ಎಐಎಡಿಎಂಕೆ ಸಂಸದ ಎ.ನವನೀತಕೃಷ್ಣನ್ ನೇತೃತ್ವದ ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಇತ್ತೀಚೆಗೆ ಮುಕ್ತಾಯವಾದ ಸಂಸತ್ನ ಚಳಿಗಾಲದ ಅಧಿವೇಶನದ ವೇಳೆ, ಭರವಸೆಗಳ ಮೇಲಿನ ಸಮಿತಿಯು ರಾಜ್ಯಸಭೆಯಲ್ಲಿ ವರದಿಯೊಂದನ್ನು ಮಂಡಿಸಿತ್ತು. ಐಪಿಸಿಗೆ ಉದ್ದೇಶಿತ ತಿದ್ದುಪಡಿಗಳನ್ನು ಅಂತಿಮಗೊಳಿಸುವಲ್ಲಿನ ವಿಳಂಬವನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಕಾರಣಕ್ಕೆ ಸಂಸದೀಯ ಸಮಿತಿಯು ಗೃಹ ಸಚಿವಾಲಯವನ್ನು ಟೀಕಿಸಿದೆ.
ಈ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಗೃಹ ಸಚಿವಾಲಯ ಮಂಡಿಸಿದ್ದ ವರದಿಯಲ್ಲಿ ಉಲ್ಲೇಖಿಸಿರುವಂತೆ, 5,569 ಜನರು ಕಸ್ಟಡಿಯಲ್ಲಿ ಇರುವಾಗ ಮೃತಪಟ್ಟಿದ್ದಾರೆ. ಈ ಪೈಕಿ 348 ಜನರು ಪೊಲೀಸ್ ಕಸ್ಟಡಿಯಲ್ಲಿ ಹಾಗೂ 5,221 ಮಂದಿ ನ್ಯಾಯಾಂಗ ಕಸ್ಟಡಿಯಲ್ಲಿ ಇದ್ದಾಗ ಮೃತಪಟ್ಟಿದ್ದಾರೆ. ಇವರ ಸಾವಿಗೆ ಕಸ್ಟಡಿಯಲ್ಲಿದ್ದಾಗಿನ ಚಿತ್ರಹಿಂಸೆಯೇ ಕಾರಣ ಎಂಬುದಾಗಿ ವರದಿಯಲ್ಲಿ ಹೇಳಲಾಗಿಲ್ಲ.